ಖಾಸಗಿ ಆಸ್ಪತ್ರೆ ಶೇ.75 ಬೆಡ್ ಸೋಂಕಿತರಿಗೆ ಒದಗಿಸಲಿ
Team Udayavani, May 11, 2021, 11:06 AM IST
ದೇವನಹಳ್ಳಿ: ಪಾಸಿಟಿವ್ ಬಂದಾಕ್ಷಣ ಆತಂಕಕ್ಕೆ ಒಳಗಾಗದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳ ಬೇಕು. ತಾಲೂಕಿನ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಇದ್ದು, ಜಿಲ್ಲಾ ಡಳಿತ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಛಲವಾದಿ ಮಹಾ ಸಭಾ ತಾಲೂಕು ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಕಾಳಪ್ಪನವರ ವೆಂಕಟೇಶ್ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ಆಶಾ ಕಾರ್ಯಕರ್ತೆಯರು,ಶುಶ್ರೂಷಕಿಯರು ಸರಿಯಾದ ಮಾರ್ಗಸೂಚಿ ನೀಡಿ, ಔಷಧೋಪಚಾರ ಮಾಡಬೇಕು. ಶಾಸಕ ಎಲ್. ಎನ್. ನಾರಾಯಣಸ್ವಾಮಿ, ಅವರ ಕುಟುಂಬದವರಿಗೆ ಸೋಂಕು ದೃಢಪಟ್ಟಿದ್ದು, ಆದಷ್ಟು ಬೇಗ ಗುಣಮುಖರಾಗ ಲೆಂದು ಪ್ರಾರ್ಥಿಸುತ್ತೇವೆಂದರು. ಈಗಾಗಲೇ ದೂರವಾಣಿ ಮೂಲಕ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಿ ಬಗೆಹರಿಸುವ ಕೆಲಸ ಶಾಸಕರು ಮಾಡುತ್ತಿದ್ದಾರೆ. ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇ.75 ಬೆಡ್ ಕೊಡಿಸಿ ಚಿಕಿತ್ಸೆ ಒದಗಿಸಬೇಕು ಎಂದರು.
ಸಚಿವರ ಮೂಲಕ ಆಕ್ಸಿಜನ್ ಕಾನ್ಸೆನ್ಟ್ರೇಟರ್ಗಳ ವಿತರಣೆ :
ದೇವನಹಳ್ಳಿ: ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಮಂಗಳವಾರ ಕೋವಿಡ್ ಕೇರ್ ಕೇಂದ್ರ ಗಳಿಗೆ ಆಕ್ಸಿಜನ್ ಕಾನ್ಸೆನ್ಟ್ರೇಟರ್ ಮತ್ತು ಔಷಧೀಯ ಕಿಟ್ ವಿತರಿಸಲಿದ್ದಾರೆ. ಕಂದಾಯ ಸಚಿವರು ಮಂಗಳವಾರ ಬೆಳಗ್ಗೆ 11:30ಕ್ಕೆ ತಾಲೂಕು ಕಚೇರಿ ಆವರಣದಲ್ಲಿ ಬೆಂ. ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲೂಕಿನ ಕೋವಿಡ್ ಕೇರ್ ಸೆಂಟರ್ಗಳಿಗೆ ತಲಾ 40 ಆಕ್ಸಿಜನ್ ಕಾನ್ಸನ್ಟ್ರೇಟರ್ (oxygen concentrators) ಮತ್ತು ಔಷಧೀಯ ಕಿಟ್ ಗಳನ್ನು ಸಂಬಂಧಪಟ್ಟ ಜಿಲ್ಲೆಯ ಶಾಸಕರುಗಳ ಉಪಸ್ಥಿತಿಯಲ್ಲಿ ಆಯಾ ತಾಲೂಕು ವೈದ್ಯಾಧಿಕಾರಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.