ಕಾಲು ಜಾರಿ ಬಿದ್ದ ಜಲಪಾತ ವೀಕ್ಷಣೆಗೆ ಬಂದಿದ್ದ ಮಗು : ತಲೆ-ಮುಖಕ್ಕೆ ಪೆಟ್ಟು
Team Udayavani, Aug 14, 2021, 6:45 PM IST
ಬೆಳ್ತಂಗಡಿ : ಅಬ್ಬಿ ಜಲಪಾತ ವೀಕ್ಷಣೆಗಾಗಿ ಬೆಂಗಳೂರಿನಿಂದ ಆಗಮಿಸಿದ್ದ 17 ಮಂದಿ ಇದ್ದ ಕುಟುಂಬವೊಂದರ ಐದು ವರ್ಷದ ಮಗುವೊಂದು ಕಾಲು ಜಾರಿ ಬಿದ್ದು ಮುಖ ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಇಂದು (ಆ.14) ಮಧ್ಯಾಹ್ನ ನಡೆದಿದೆ.
ಐದು ವರ್ಷ ವಯಸ್ಸಿನ ಬಾಲಕಿ ಶ್ರೇಯಾ ಬಾಲಕಿಯೇ ಗಾಯಗೊಂಡಿದ್ದಾಳೆ. ಚಾರಣಿಗರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲರಾಯನದುರ್ಗ ಕಡೆಯಿಂದ ಅಬ್ಬಿ ಜಲಪಾತದ ಕಡೆಗೆ ಬಂದಿದ್ದರು. ಈ ವೇಳೆ ಜೊತೆಯಲ್ಲಿದ್ದ ಐದು ವರ್ಷದ ಮಗು ಶ್ರೇಯಾ ಪಾಚಿಗಟ್ಟಿದ ಕಲ್ಲಿನ ಮೇಲೊಂದರಿಂದ ಅಲ್ಪ ಆಳಕ್ಕೆ ಜಾರಿ ಬಿದ್ದಿದ್ದಾಳೆ. ತಕ್ಷಣ ಅವರನ್ನು ಕುಟುಂಬಿಕರೇ ರಕ್ಷಣೆ ಮಾಡಿ, ಕಾಲ್ನಡಿಗೆ ದಾರಿ ಮೂಲಕ ತೆರಳಿ ಮಗುವನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ಘಟನೆಯಲ್ಲಿ ಮಗುವಿನ ಮುಖ, ತಲೆಗೆ ಹೆಚ್ಚಿನ ಪೆಟ್ಟು ಬಿದ್ದಿದೆ.
ಇನ್ನು ಮಗು ಬಿದ್ದ ವಿಷಯ ತಿಳಿದು ಬೆಳ್ತಂಗಡಿ ಅಗ್ನಿಶಾಮಕದಳ ಹಾಗೂ ಬೆಳ್ತಂಗಡಿ ಪೊಲೀಸರು ಹಾಗೂ ಇತರ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದರು. ಆದರೆ, ಅಷ್ಟರಲ್ಲಾಗಲೆ ಮಗುವನ್ನು ಕುಟುಂಬದವರೆ ಆಸ್ಪತ್ರೆಗೆ ಸೇರಿಸಿದ್ದರಿಂದ, ರಕ್ಷಣಾ ಕಾರ್ಯಕ್ಕೆ ಬಂದಿದ್ದವರು ವಾಪಸ್ ತೆರಳಿದರು.