ಕಲ್ಲಂಗಡಿ ಬೆಳೆಗೆ ಅಂಗಡಿಯಾತ ನೀಡಿದ್ದ ಕ್ರಿಮಿನಾಶಕ ಸಿಂಪಡಣೆ: ಬೆಳೆ ನಾಶ, ದೂರು ದಾಖಲು
Team Udayavani, Oct 28, 2021, 11:25 AM IST
ಹುಣಸೂರು: ಕಲ್ಲಂಗಡಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿ ಕೈಸುಟ್ಟು ಕೊಂಡಿರುವ ರೈತರೊಬ್ಬರು ನ್ಯಾಯ ಕೊಡಿಸುವಂತೆ ತೋಟಗಾರಿಕೆ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿರುವ ಘಟನೆ ತಾಲೂಕಿನ ಮಂಚಬಾಯನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಮಂಚಬಾಯನಹಳ್ಳಿ ಗ್ರಾಮದ ಶಿವರಾಮೇಗೌಡರ ಪುತ್ರ ರಾಜೇಶ್ರವರೇ ಕಲ್ಲಂಗಡಿ ಬೆಳೆ ನಷ್ಟಕ್ಕೊಳಗಾಗಿ ಕಣ್ಣೀರಿಡುತ್ತಿರುವ ರೈತ.
ಕ್ರಿಮಿನಾಶಕ ಸಿಂಪಡಣೆ ಬೆನ್ನಲ್ಲೇ ಸುರುಟಿಕೊಂಡ ಬೆಳೆ:
ರೈತ ರಾಜೇಶ್ ಮಂಚಬಾಯನಹಳ್ಳಿಯ ತಮ್ಮ ಮೂರು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದರು. ೩ ತಿಂಗಳಾಗಿದ್ದ ಬೆಳೆಗೆ ಕೀಟನಾಶಕ ಸಿಂಪಡಿಸಲು ಗಾವಡಗಡರೆಯ ಚಿಕ್ಕದೇವಮ್ಮ ಆಗ್ರೋ ರಸಗೊಬ್ಬರದ ಅಂಗಡಿಯಲ್ಲಿ ಕ್ರಿಮಿನಾಶಕ ಔಷಧವನ್ನು ಕೇಳಿದ ವೇಳೆ ಆತ ಅಂಟ್ರಾಕಾಲ್, ಲಿಜೆಂಡಾ, ಜಿಬೂ, ಪ್ರೇಮ್ ಎಂಬ ಕೀಟನಾಶಕಗಳನ್ನು ನೀಡಿ ಮಿಶ್ರಣ ಮಾಡಿ ಸಿಂಪಡಿಸಬೇಕೆಂಬ ಶಿಪಾರಸ್ಸಿನಂತೆ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗೆ ಸಿಂಪಡಿಸುತ್ತಿದ್ದ ವೇಳೆಯೇ ಗಿಡಗಳು ಸುರುಟಿಕೊಂಡ ಸಾಯಲಾರಂಬಿಸಿದವು. ತಕ್ಷಣವೇ ರಸಗೊಬ್ಬರದ ಅಂಗಡಿಯವರನ್ನು ಸಂಪರ್ಕಿಸಿ ಸಸಿಗಳು ಸಾವನ್ನಪ್ಪುತ್ತಿರುವ ಬಗ್ಗೆ ತಿಳಿಸಿದಾಗ ಏನೂ ಆಗಲ್ಲ, ಎಲ್ಲ ಕ್ರಿಮಿನಾಶಕ ಸಿಂಪಡಿಸಿರೆಂದು ಸೂಚಿಸಿದರು.
ಆದರೆ ಸಸಿಗಳ ಸಾವಿನಿಂದ ಆತಂಕಗೊಂಡು ಬಾಕಿ ಉಳಿದಿದ್ದ ಒಂದೂವರೆ ಎಕರೆ ಬೆಳೆಗೆ ಕ್ರಿಮಿನಾಶಕ ಸಿಂಪಡಿಸದ್ದರಿಂದ ಬೆಳೆ ಉಳಿದಿದ್ದು, ರಸಗೊಬ್ಬರದ ಅಂಗಡಿ ಮಾಲಿಕನಿಗೆ ವಿಚಾರಿಸಿದಾಗ ನಾನೇನು ಮಾಡಕ್ಕಾಗಲ್ಲ, ನಾವು ಜವಾಬ್ದಾರರಲ್ಲವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಕಣ್ಣೀರು ಹಾಕಿರುವ ರೈತ ರಾಜೇಶ್ರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದ್ದು, ಮುಂದೆ ಇನ್ಯಾವ ರೈತರಿಗೂ ಈ ಪರಿಸ್ಥಿತಿ ಬರಬಾರದು, ಅಂಗಡಿಯ ಲೈಸನ್ಸ್ ರದ್ದುಗೊಳಿಸಬೇಕು, ಮಾಲಿಕನ ವಿರುದ್ದ ಕ್ರಮ ಕೈಗೊಳ್ಳಬೇಕು, ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸಿಕೊಡುವಂತೆ ರೈತ ರಾಜೇಶ್ ಈ ಸಂಬಂಧ ರಸಗೊಬ್ಬರದ ಅಂಗಡಿ ಮಾಲಿಕರ ವಿರುದ್ದ ಕ್ರಮಕೈಗೊಂಡು ಸೂಕ್ತ ಪರಿಹಾರ ಕೊಡಿಸುವಂತೆ ತಹಸೀಲ್ದಾರ್, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ರೈತನ ದೂರಿನ ಮೇರೆಗೆ ಸ್ಥಳಕ್ಕೆ ತೋಟಗಾರಿಕಾ ಅಧಿಕಾರಿ ಶರತ್ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ:
“ಕಷ್ಟಪಟ್ಟು ಬೆಳೆದಿದ್ದ ಕಲ್ಲಂಗಡಿ ಬೆಳೆ ಕಾಯಿ ಬಿಡುವ ಹಂತದಲ್ಲಿತ್ತು. ರೋಗ ಬಾರದಂತೆ ಮುನ್ನೆಚ್ಚರಿಕೆಯಾಗಿ ಕ್ರಿಮಿನಾಶಕ ಸಿಂಪಡಣೆಗೆ ಮುಂದಾಗಿದ್ದು, ಮುಗ್ದರೈತನಿಗೆ ತರೆಹವಾರಿ ಕ್ರಿಮಿನಾಶಕ ನೀಡಿ ಸರಿಯಾದ ರೀತಿಯಲ್ಲಿ ಶಿಪಾರಸ್ಸು ಮಾಡದ್ದರಿಂದ ಬೆಳೆ ನಷ್ಟ ಉಂಟಾಗಿದೆ. ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಂಗಡಿ ಲೈಸನ್ಸ್ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ರೈತ ಸಂಘದವತಿಯಿಂದ ಪ್ರತಿಭಟನೆ ನಡೆಸಲಾಗುವುದು.” – ನಟರಾಜ್, ತಾಲೂಕು ಉಪಾಧ್ಯಕ್ಷ, ರೈತಸಂಘ.
ಅಂಗಡಿ ಮಾಲಿಕನಿಗೆ ನೋಟೀಸ್:
ಕಲ್ಲಂಗಡಿ ಬೆಳೆಗೆ ಅಂಗಡಿಯವರು ಕೀಟನಾಶಕ, ಶಿಲಿಂದ್ರನಾಶಕ ಹಾಗೂ ಸಸಿ ಬೆಳವಣಿಗೆಯ ಟಾನಿಕ್ ನೀಡಿರುವುದು, ಮಾಡಿರುವ ಶಿಪಾರಸ್ಸು ಕೂಡ ಅವೈಜ್ಞಾನಿಕವಾಗಿದೆ. ಇಲಾಖೆಯ ತಜ್ಞರ ಶಿಪಾರಸ್ಸಿಲ್ಲದೆ ಕ್ರಿಮಿನಾಶಕ ನೀಡಿರುವುದು ತಪ್ಪು. ಈ ಸಂಬAಧ ಅಂಗಡಿಯವರಿಗೆ ನೋಟೀಸ್ ನೀಡಲಾಗುವುದು.
ರೈತರು ಸಹ ಸ್ವಯಂ ಅಥವಾ ರಸಗೊಬ್ಬರದ ಅಂಗಡಿಯವರು ನೀಡುವ ಕ್ರಿಮಿನಾಶಕ, ಗೊಬ್ಬರಗಳನ್ನು ಅನಾವಶ್ಯಕವಾಗಿ ಬಳಸದೆ ಕೃಷಿ-ತೋಟಗಾರಿಕೆ ಇಲಾಖೆಯ ಗಮನಕ್ಕೆ ತಂದು ಶಿಪಾರಸ್ಸು ಮಾಡುವ ಔಷಧ ಬಳಸಬೇಕು. –ನೇತ್ರಾವತಿ, ತೋಟಗಾರಿಕೆ ಸಹಾಯಕ ನಿರ್ದೇಶಕರು.