ಉಕ್ರೇನ್ ನಲ್ಲಿ ದಾಳಿ ನಿಂತ ಬಳಿಕ ನವೀನ್ ದೇಹ ತರುವ ಬಗ್ಗೆ ಕ್ರಮ: ಸಿಎಂ ಬೊಮ್ಮಾಯಿ
Team Udayavani, Mar 13, 2022, 12:36 PM IST
ಬೆಂಗಳೂರು: ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ದೇಹವನ್ನು ರಾಜ್ಯಕ್ಕೆ ತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಉಕ್ರೇನ್ ನಲ್ಲಿ ಬಾಂಬಿಂಗ್ ಇನ್ನೂ ನಡೆಯುತ್ತಿದೆ. ದಾಳಿ ನಿಂತ ನಂತರ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರೇಸ್ ಕೋರ್ಸ್ ನಿವಾಸಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಉಕ್ರೇನ್ ನಲ್ಲಿರುವ ಭಾರತೀಯರ ಸ್ಥಳಾಂತರ ಅಂತಿಮ ಹಂತಕ್ಕೆ ಬಂದಿದೆ. ಉಕ್ರೇನ್ ನಲ್ಲಿ ಉಳಿದವರಿಗೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಲು ಭಾರತ ಮುಂದಾಗಿದೆ ಎಂದರು.
ಅವಧಿಪೂರ್ಣ ಚುನಾವಣೆ: ರಾಜ್ಯದಲ್ಲಿ ಅವಧಿಪೂರ್ಣ ಚುನಾವಣೆ ಚರ್ಚೆ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ಅವಧಿಪೂರ್ಣ ಚುನಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಯಾವುದೇ ಹಂತದಲ್ಲೂ, ಎಲ್ಲೂ ಕೂಡಾ ಪಕ್ಷದಲ್ಲಿ ಚರ್ಚೆ ನಡೆಯುತ್ತಿಲ್ಲ ಎಂದರು.
ದೆಹಲಿಗೆ ಭೇಟಿಯ ಬಗ್ಗೆ ಮಾತನಾಡಿದ ಸಿಎಂ, ವರಿಷ್ಠರು ಇನ್ನೂ ಸೂಚನೆ ಕೊಟ್ಟಿಲ್ಲ. ವರಿಷ್ಠರ ಸೂಚನೆ ಕೊಟ್ಟ ಮೇಲೆ ದೆಹಲಿಗೆ ಹೋಗುತ್ತೇನೆ. ವರಿಷ್ಠರು ಯಾವಾಗ ಹೇಳುತ್ತಾರೋ ಆಗ ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಮುಂದಿನ ಚುನಾವಣೆಗೆ ಈಗಿನಿಂದಲೇ ತಂತ್ರ; ದಾವಣಗೆರೆ ಉತ್ತರ ಕ್ಷೇತ್ರದತ್ತ ಬೊಮ್ಮಾಯಿ ಚಿತ್ತ?
ನಮ್ಮ ಪಕ್ಷ ಬಿಟ್ಟು ಯಾರೂ ಹೋಗಲ್ಲ. ಇನ್ನೊಂದು ಪಕ್ಷಕ್ಕೆ ಯಾರೂ ನಮ್ಮಿಂದ ಹೋಗುವುದಿಲ್ಲ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಕಾದು ನೋಡಿ ಎಂದು ಕಾಂಗ್ರೆಸ್, ಜೆಡಿಎಸ್ ನಿಂದ ಬರುವವರ ಬಗ್ಗೆ ಸಿಎಂ ಸುಳಿವು ಕೊಟ್ಟರು.
ಇದೇ 30, 31 ರಂದು ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆಯಿದೆ. ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಪ್ರವಾಸ ಸೇರಿ ಎಲ್ಲ ವಿಚಾರಗಳು ಚರ್ಚೆಯಾಗುತ್ತವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.