ಪ್ರವೀಣ್ ಮನೆಗೆ ಮಾಜಿ ಸಿಎಂ ಡಿವಿಎಸ್ ಭೇಟಿ:’ದಿಟ್ಟ ಹೆಜ್ಜೆ ಇಡುವಲ್ಲಿ ಹಿಂದೆ ಬಿದ್ದಿದ್ದೇವೆ’
Team Udayavani, Jul 30, 2022, 4:28 PM IST
ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಅವರು ಶನಿವಾರ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ತಿಳಿಸಿದರು. ಈ ವೇಳೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಿದರು.
ಇತ್ತೀಚೆಗೆ ನಡೆದ ಘಟನೆಗಳನ್ನು ಗಮನಿಸಿ ನಮ್ಮದೇ ಸರಕಾರ ಸ್ವಲ್ಪ ದಿಟ್ಟ ಹೆಜ್ಜೆಯನ್ನಿಡಬೇಕಿತ್ತು. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ನಾವು ಹಿಂದೆ ಬಿದ್ದಿದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಂತಹ ಕೃತ್ಯ ತಡೆಗೆ ವಿಶೇಷ ಕಟ್ಟೆಚ್ಚರ ವಹಿಸಬೇಕಿದೆ. ಇತ್ತೀಚಿನ ದಿನದಲ್ಲಿ ಪೊಲೀಸರೆಂದರೆ ಭಯವೇ ಇಲ್ಲದಂತಾಗಿರುವುದು ಬೇಸರ ತರಿಸಿದೆ. ಪ್ರವೀಣ್ಗೆ ಬೆದರಿಕೆ ಬರುತ್ತಿತ್ತು. ಪೊಲೀಸರಿಗೆ ಹೇಳಿದ್ದರು, ಆದರೂ ಪೊಲೀಸರು ಕಾರ್ಯಚರಣೆ ನಡೆಸಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಇದು ಗಂಭೀರ ಪ್ರಶ್ನೆಯಾಗಿದೆ.
ನಮ್ಮ ಸರಕಾರ ಬಂದ್ರೆ ನಮಗೆಲ್ಲ ರಕ್ಷಣೆ ಸಿಗುತ್ತದೆ ಎಂಬ ಕಾರ್ಯಕರ್ತರ ಭಾವನೆಯಿತ್ತು, ಆದರೆ ಅದರಲ್ಲಿ ಸ್ವಲ್ಪ ಕೊರತೆಯಾಗಿದೆ ಎಂಬ ಭಾವನೆಯಿದೆ ಎಂದ ಅವರು ನಾನು ಲೋಕಸಭಾ ಅಧೀವೇಶದಲ್ಲಿದ್ದುದರಿಂದ ಇಲ್ಲಿಗೆ ಇಂದು ಬರಬೇಕಾಯಿತು ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಬಾಲಿವುಡ್ ಮುಗಿಯುತು ಎನ್ನುವುದು ಅಸಂಬದ್ಧ: ಕರಣ್ ಜೋಹರ್
ತನಿಖೆ ಎನ್ಐಎಗೆ:
ಪ್ರವೀಣ್ ಹತ್ಯೆ ತನಿಖೆ ಎನ್ಐಎಗೆ ವಹಿಸುವ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಗೃಹ ಇಲಾಖೆ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ನಾವು ಮಂಗಳವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಿದ್ದೇವೆ.
ಮಂಗಳೂರಿನಲ್ಲಿ ಎನ್ಐಎ ಕೇಂದ್ರ;
ಕರ್ನಾಟಕಕ್ಕೆ ಬರುವ ಎನ್ಐಎ(ರಾಷ್ಟ್ರೀಯ ತನಿಖಾ ಸಳ) ಶಾಖೆಯನ್ನು ಮಂಗಳೂರಿನಲ್ಲಿ ಮಾಡಬೇಕೆಂಬ ಬೇಡಿಕೆ ಇದೆ. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಸ್ಥಳ ವೀಕ್ಷಣೆ ಕೂಡ ನಡೆಯುತ್ತಿದೆ. ಶೀಘ್ರ ಎನ್ಐಎ ಕೇಂದ್ರ ಆರಂಭಗೊಳ್ಳುವ ನಿರೀಕ್ಷೆ ಇದೆ.
ವೈಯಕ್ತಿಕವಾಗಿ ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ. ಆದರೆ ಇಂತಹ ಕೃತ್ಯ ನಡೆಯದಂತ ವಾತವರಣ ನಿರ್ಮಿಸಬಹುದಾಗಿದೆ. ಅಂತಹ ಅವಶ್ಯಕತೆಯಿದ್ದು, ಅದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.