ಜನರೀಗ ರಾಹುಲ್ ಗಾಂಧಿಯ ನಿಜವಾದ ಮುಖವನ್ನು ನೋಡುತ್ತಿದ್ದಾರೆ: ವೇಣುಗೋಪಾಲ್
Team Udayavani, Nov 27, 2022, 3:48 PM IST
ಇಂದೋರ್ (ಮಧ್ಯಪ್ರದೇಶ) : ಜನರು ಈಗ ರಾಹುಲ್ ಗಾಂಧಿಯ ನಿಜವಾದ ಮುಖವನ್ನು ನೋಡುತ್ತಿದ್ದಾರೆ. ಅವರು ವಿದ್ಯಾವಂತ, ಸಹಾನುಭೂತಿ ಹೊಂದಿದ್ದು ಉತ್ತಮ ನಿಲುವು ತೆಗೆದುಕೊಳ್ಳುವ ವ್ಯಕ್ತಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ,’ಕಳೆದ ಕೆಲವು ವರ್ಷಗಳಿಂದ ಬಿಜೆಪಿ ರಾಹುಲ್ ಗಾಂಧಿಯವರ ವರ್ಚಸ್ಸು ಹಾಳು ಮಾಡುವ ಕೆಲಸದಲ್ಲಿ ನಿರತವಾಗಿದೆ. ಆದರೆ ರಾಹುಲ್ ಅವರು ಸಂಘಟನೆ ನಡೆಸಿ ಕೈಗೊಂಡ ಭಾರತ್ ಜೋಡೋ ಯಾತ್ರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ರಾಜಕೀಯ ಯಾತ್ರೆಯಲ್ಲ’ ಎಂದರು.
‘ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟಿನ ವಿಚಾರ ಸೌಹಾರ್ದಯುತ ಇತ್ಯರ್ಥವಾಗಲಿದೆ.ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಗೆ ದೊಡ್ಡ ಯಶಸ್ಸು ದೊರಕಿದೆ’ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.