ಬಂಟ್ವಾಳ: ನದಿ ನೀರೆತ್ತುವ ಕೃಷಿ ಪಂಪು ಸೆಟ್ಗಳ ವಿದ್ಯುತ್ ಕಡಿತಕ್ಕೆ ಕೃಷಿಕರ ಆಕ್ರೋಶ
ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಕ್ಷೀಣ
Team Udayavani, Apr 19, 2023, 6:10 AM IST
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಒಳಹರಿವು ನಿಂತು ಹೋಗಿ ನೀರಿನ ಪ್ರಮಾಣದ ಗಣನೀಯ ಇಳಿಕೆಯಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ. ಜಿಲ್ಲಾಧಿಕಾರಿಗಳ ಆದೇಶದಂತೆ ನದಿಯಿಂದ ನೀರನ್ನೆತ್ತುವ ಕೃಷಿ ಪಂಪು ಸೆಟ್ಗಳ ವಿದ್ಯುತ್ ಕಡಿತ ಮಾಡಿರುವುದು ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೇಸಗೆಯ ಕಾರಣದಿಂದ ದಿನೇ ದಿನೆ ನದಿಯಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿರುವುದರಿಂದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಕುಡಿಯವ ನೀರಿಗೆ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿಗಳು ಕುಡಿಯುವ ಉದ್ದೇಶ ಹೊರತುಪಡಿಸಿ ಕೈಗಾರಿಕೆ, ಕೃಷಿ ಬಳಕೆಗೆ ಉಪಯೋಗಿಸಿದಂತೆ ಆದೇಶ ನೀಡಿದ್ದಾರೆ. ಹೀಗಾಗಿ ಮೆಸ್ಕಾಂ ನದಿ ಪಾತ್ರದ ಪಂಪುಸೆಟ್ಗಳ ವಿದ್ಯುತ್ ಕಡಿತ ಮಾಡಿದೆ.
ನದಿ ಪಾತ್ರದ ಕೃಷಿಕರು ನದಿಯ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದು, ಬಿರು ಬಿಸಿಲಿನ ಸಂದರ್ಭದಲ್ಲಿ ನೀರಿನ ಸಂಪರ್ಕ ಕಡಿತ ಮಾಡಿದರೆ ಕೃಷಿ ಬೆಳೆಗಳ ಪರಿಸ್ಥಿತಿ ಹೇಗಾಗಬಹುದು ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮ ಸೇರಿದಂತೆ ಸಾಕಷ್ಟು ಗ್ರಾಮಗಳ ಕೃಷಿಕರು ನದಿಯ ನೀರನ್ನೇ ನಂಬಿ ಕೃಷಿ ಕಾಯಕ ಮಾಡುತ್ತಿದ್ದಾರೆ.
ಸುಡು ಬಿಸಿಲಿನ ಸಂದರ್ಭ ನೀರುಣಿಸದೆ ಅಡಿಕೆ, ತೆಂಗು, ಬಾಳೆ, ಇನ್ನಿತರ ಬೆಳೆಗಳು ಸರ್ವನಾಶವಾಗಲಿವೆ. ರೈತರ ಬೆಳೆ ಉಳಿಸಲು ಪರ್ಯಾಯ ವ್ಯವಸ್ಥೆ ಮಾಡದೆ ಜಿಲ್ಲಾಡಳಿತ ರೈತರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಹೀಗಾಗಿ ಬೀದಿಗಿಳಿದು ಹೋರಾಟ ಮಾಡುವುದಕ್ಕೆ ಮೊದಲು ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಆಗ್ರಹಿಸಿದ್ದಾರೆ.