ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಶನಲ್ ಶತಮಾನೋತ್ಸವ: ವಲಯ ಸಂಗಮ
Team Udayavani, Mar 28, 2017, 3:09 PM IST
ಕುಂಬಳೆ: ಜಗತ್ತಿನ ಅತಿದೊಡ್ಡ ಸಂಸ್ಥೆಯಾದ ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಶನಲ್ ತನ್ನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ 318ಇ ರೀಜನ್ 10 (ಇನ್ನೋವೇಟರ್ ) ವಲಯ ಸಂಗಮವನ್ನು ಡಿಸ್ಟ್ರಿಕ್ಟ್ 318 ಇ ರೀಜನ್ 10 ರ ರೀಜನ್ ಚೆಯರ್ ಪರ್ಸನ್ ಲಯನ್ ಲಕ್ಷ್ಮಣ ಕುಂಬಳೆ ಅವರ ನೇತೃತ್ವದಲ್ಲಿ ವಲಯ ಸಂಗಮ ಕಾರ್ಯಕ್ರಮವು ತೊಕೋಟು ಗಟ್ಟಿ ಸಮಾಜ ಭವನದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳೊಂದಿಗೆ ಜರಗಿತು.
ರೀಜನ್ ಚೆಯರ್ ಪರ್ಸನ್ ಲಯನ್ ಲಕ್ಷ್ಮಣ ಕುಂಬಳೆ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ ನ್ಯಾಯವಾದಿ ವಿ. ಅಮರನಾಥ್, ಕಣ್ಣೂರು ವಿವಿ ಉಪಕುಲಪತಿ ಡಾ| ಕೆ. ಅಬ್ದುಲ್ ಖಾದರ್ ಮಾಂಗಾಡ್ ಭಾಗವಹಿಸಿದರು. ಸಮಾರಂಭದಲ್ಲಿ ತುಳು ಜಾನಪದ ವಿದ್ವಾಂಸ, ಸಾಹಿತಿ ಪ್ರೊ| ಅಮೃತ ಸೋಮೇಶ್ವರ, ಮನೆ ದಾನಿ, ಸಾಮಾಜಿಕ ಕಾರ್ಯಕರ್ತ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಮತ್ತು ಲಯನ್ ಕವಿತಾ ಶಾಸ್ತ್ರಿ, ಲಯನ್ ಶಿವಪ್ರಸಾದ್ ಕೆ. ಅವರನ್ನು ಸಮ್ಮಾನಿಸಲಾಯಿತು. ಅಲ್ಲದೆ ಅರ್ಹ 10 ವಿಕಲಾಂಗರಿಗೆ ಗಾಲಿ ಕುರ್ಚಿಗಳನ್ನು ಮತ್ತು ಕನ್ಯಾನ ಭಾರತ ಸೇವಾಶ್ರಮಕ್ಕೆ ಸ್ಟ್ರೆಚರ್ನ್ನು ವಿತರಿಸಲಾಯಿತು. ಲಯನ್ ಪ್ರಶಾಂತ್ ಜಿ. ನಾಯರ್ ಮತ್ತು ಲಯನ್ ಕೆ.ವಿ. ಸತೀಶನ್ ಪ್ರಸ್ತಾವನೆ ಗೈದರು. ಲಯನ್ ಪಿ. ಗೋವಿಂದನ್ ಧ್ವಜ ಪ್ರತಿಜ್ಞೆ ಭೋಧಿಸಿದರು. ವಲಯ ಮಟ್ಟದಲ್ಲಿ ಜರಗಿದ ಕಾರ್ಯಕ್ರಮಗಳ ವರದಿಯನ್ನು ಮಂಡಿಸಲಾಯಿತು. ಲಯನೆಸ್ ಸುಶ್ಮಾ ರಾಧಾಕೃಷ್ಣನ್ ಪ್ರಾರ್ಥನೆ ಹಾಡಿದರು. ಲಯನ್ ಪ್ರವೀಣ್ ಪಕಳ ವಂದಿಸಿದರು.
ಸಾಂಸೃತಿಕ ಕಾರ್ಯಕ್ರಮದಂಗವಾಗಿ ಲಿಯೊ ಲಕ್ಷ್ಮೀ ಮತ್ತು ಲಿಯೊ ದೀಕ್ಷಿತಾ ನಾಯರ್ ಅವರಿಂದ ರಂಗಪೂಜೆ, ಲಿಯೊ ನಿಮಿಷಾ ನಾಯರ್ ಅವರಿಂದ ಕೂಚುಪುಡಿ ನೃತ್ಯ, ತುಳುನಾಡ ರತ್ನ ದಿನೇಶ್ ಅತ್ತಾವರ ಅವರಿಂದ ಯಕ್ಷಗಾನ ನೃತ್ಯ ಮತ್ತು ಪ್ರಕಾಶ್ ಮಾಧವನ್ ಬಳಗದಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.