ಬಾಂಬ್ ನಾಗನಿಗೂ ನನಗೇನ್ರಿ ಸಂಬಂಧ, ಯಾರೀ ಮಂಜುನಾಥ?; ಸಿಎಂ
Team Udayavani, Apr 22, 2017, 6:07 PM IST
ಶಿವಮೊಗ್ಗ/ಬೆಂಗಳೂರು: ಯಾರೀ ಮಂಜುನಾಥ? ನನ್ನ ಬಳಿ ಮಂಜುನಾಥ ಎಂಬವರು ಯಾರು ಇಲ್ಲ…ಬಾಂಬ್ ನಾಗನಿಗೂ ನನಗೇನ್ರಿ ಸಂಬಂಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ರೌಡಿಶೀಟರ್ ಬಾಂಬ್ ನಾಗ ವಿಡಿಯೋ ಬಿಡುಗಡೆ ಮಾಡಿ ಆರೋಪಿಸಿರುವ ಕುರಿತು ಸುದ್ದಿಗಾರರು ಕೇಳಿದಾಗ, ಮಂಜುನಾಥ ಹೆಸರು ಕೇಳಿದ ತಕ್ಷಣ ಗರಂ ಆಗಿ ಯಾರೀ ಮಂಜುನಾಥ ಎಂದು ಪ್ರಶ್ನಿಸಿದ್ದರು.
ಬ್ಲ್ಯಾಕ್ ಅಂಡ್ ವೈಟ್ ದಂಧೆಗೆ ಸಿಎಂ ಸ್ಪೆಶಲ್ ಪಿಎ (ಮಂಜುನಾಥ) ಬಾಸ್ ಎಂದು ಬಾಂಬ್ ನಾಗ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಆರೋಪಿಸಿದ್ದಾನೆ. ಅಲ್ಲದೇ ವಿಡಿಯೋದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ಮುಖಂಡ ಪಿಸಿ ಮೋಹನ್ ಹಾಗೂ ಪೊಲೀಸ್ ಅಧಿಕಾರಿಗಳ ಹೆಸರಿನ ಉಲ್ಲೇಖವಿದೆ.
ಬಾಂಬ್ ನಾಗನ ಬಂಧಿಸಿ, ವಿಚಾರಣೆ ನಡೆಸಬೇಕಾಗಿದೆ; ಪರಂ
ನಾಗನ ಮನೆಯಲ್ಲಿದ್ದ ಹಳೇ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೌಡಿ ಶೀಟರ್ ಬಾಂಬ್ ನಾಗನನ್ನು ಕೂಡಲೇ ಬಂಧಿಸಬೇಕಾಗಿದೆ. ಬಂಧನದ ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಾರೆ. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳುತ್ತರೆ. ತನಿಖೆ ಬಳಿಕ ಕೇಸ್ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತೆ. ಬಾಂಬ್ ನಾಗನ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಿಲ್ಲ. ನಾಗನನ್ನು ಪೊಲೀಸರು ಟ್ರ್ಯಾಕ್ ಮಾಡಿ ಬಂಧಿಸುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.