ಭಾಗಪ್ಪ ಹರಿಜನ ಹೈದ್ರಾಬಾದ್ ಆಸ್ಪತ್ರೆಗೆ ಸ್ಥಳಾಂತರ
Team Udayavani, Aug 10, 2017, 7:10 AM IST
ವಿಜಯಪುರ: ನ್ಯಾಯಾಲಯ ಆವರಣದಲ್ಲಿ ನಡೆದ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಭಾಗಪ್ಪ ಹರಿಜನ ಎಂಬಾತನನ್ನು ಭದ್ರತೆಯ ಕಾರಣದಿಂದಾಗಿ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ವಿಜಯಪುರದಿಂದ ಹೈದ್ರಾಬಾದ್ಗೆ ಸ್ಥಳಾಂತರಿಸಲಾಗಿದೆ.
ಮಂಗಳವಾರ ಗುಂಡಿನ ದಾಳಿ ಬಳಿಕ ತೀವ್ರ ಗಾಯಗೊಂಡಿದ್ದ ಭಾಗಪ್ಪ ಹರಿಜನನ್ನು ನಗರದ ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವದ ಮಧ್ಯೆಯೂ ಆಸ್ಪತ್ರೆ ವೈದ್ಯರು ಭಾಗಪ್ಪ ದೇಹದಿಂದ ನಾಲ್ಕು ಗುಂಡು ಹೊರ ತೆಗೆದಿದ್ದರು. ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟದ ಮೂಲಕ ಭಾಗಪ್ಪನ ಆರೋಗ್ಯ ಸ್ಥಿರವಾಗಿ ಇರಿಸುವಲ್ಲಿ ಯಶಸ್ವಿಯಾಗಿದ್ದರು.
ಇದರ ಮಧ್ಯೆಯೂ ಭದ್ರತೆ ದೃಷ್ಟಿಯಿಂದ ಭಾಗಪ್ಪನನ್ನು ವಿಜಯಪುರ ನಗರದ ಹೊರತಾಗಿ ಸುಸಜ್ಜಿತ ವೈದ್ಯಕೀಯ ಸೇವೆ ಇರುವ ನಗರಕ್ಕೆ ಸ್ಥಳಾಂತರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಹೀಗಾಗಿ ಚಿಕಿತ್ಸೆ ನೀಡುತ್ತಿದ ಬಿಎಲ್ಡಿಇ ವೈದ್ಯಕೀಯ ಕಾಲೇಜಿನ ವೈದ್ಯರ ಸಲಹೆ ಹೊರತಾಗಿಯೂ ಹೈದ್ರಾಬಾದ್ನ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಶಸ್ತ್ರಚಿಕಿತ್ಸಕ ಡಾ| ಶ್ರೇಯಸ್, ಅರವಳಿಕೆ ತಜ್ಞ ಡಾ| ಚರಣ ಹಾಗೂ ಓರ್ವ ಸ್ಟಾಫ್ ನರ್ಸ್ ನಿಗಾದಲ್ಲಿ ಬುಧವಾರ ಬೆಳಗ್ಗೆ 9ರ ಸುಮಾರಿಗೆ ಆ್ಯಂಬುಲೆನ್ಸ್ನಲ್ಲಿ ಗಾಯಾಳು ಭಾಗಪ್ಪ ಹೈದ್ರಾಬಾದ್ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದಾನೆ.