ಗೋವಾ ಸಚಿವರಿಂದ ಆಮಿಷ ಆರೋಪ
Team Udayavani, Jan 17, 2018, 9:05 AM IST
ಬೆಂಗಳೂರು/ಪಣಜಿ: ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸಾಕ್ಷಿಗಳಿಗೆ ಹಣ ನೀಡುತ್ತಿದೆ ಎಂದು
ಆರೋಪಿಸಿರುವ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹದಾಯಿ ನ್ಯಾಯಾಧೀಕರಣದಲ್ಲಿ ನಮ್ಮ ಪರ ಸಾಕ್ಷಿದಾರರಿಗೆ ನಾವು ಎಂದೂ ಸರ್ಕಾರದ ವತಿಯಿಂದ ಒಂದು ರೂಪಾಯಿ ಸಹ ನೀಡಿಲ್ಲ. ಆದರೆ ಕರ್ನಾಟಕ ಸರ್ಕಾರ ತನ್ನ ಪರ ನ್ಯಾಯಾಧೀಕರಣದಲ್ಲಿ ಸಾಕ್ಷಿ ಹೇಳಲು ಒಬ್ಬ ಸಾಕ್ಷಿದಾರರಿಗೆ ದಿನವೊಂದಕ್ಕೆ 50 ಸಾವಿರ ರೂ. ಹಾಗೂ ವರದಿ ಸಿದ್ಧಪಡಿಸಲು 5 ಲಕ್ಷ ರೂ. ಪ್ರತ್ಯೇಕವಾಗಿ ನೀಡುತ್ತಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್ ಪಣಜಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಮ್ಮ ಸಾಕ್ಷಿದಾರರಿಗೆ ಎಂದೂ ಹಣ ನೀಡಿ ತಪ್ಪು ಮಾಡಿಲ್ಲ. ಆದರೆ ಕರ್ನಾಟಕ ಸರ್ಕಾರದ ತಪ್ಪು ಇಲ್ಲಿ ಕಂಡು ಬರುತ್ತಿದೆ. ಮುಂದೆಯೂ ನಾವು ಇಂತಹ ಕೆಲಸ ಮಾಡಲು ಬಯಸುವುದಿಲ್ಲ. ಮಹದಾಯಿ ನದಿ ನಮ್ಮ ತಾಯಿಗೆ ಸಮಾನ. ಹೀಗಿರುವಾಗ ಇಂತಹ ಹೊಲಸು ರಾಜಕಾರಣ ಮಾಡಬೇಡಿ ಎಂದು ನಾವು ಕರ್ನಾಟಕ ಸರ್ಕಾರಕ್ಕೆ ಮತ್ತೂಮ್ಮೆ ಹೇಳಲು ಇಚ್ಛಿಸುತ್ತೇವೆ ಎಂದರು.
ಬೇಜವಾಬ್ದಾರಿ ಹೇಳಿಕೆ: ಈ ನಡುವೆ ಬೆಂಗ ಳೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಸಚಿವ ರದ್ದು ಅತ್ಯಂತ ಬೇಜವಾಬ್ದಾರಿ ಹಾಗೂ ಬಾಲಿಶ ಹೇಳಿಕೆ. ಅವರ ಹಾಗೆ ಮಾತನಾಡಲು ನಮಗೂ ಬರುತ್ತದೆ. ಅವರ ಮಾತು ಅವರ ಸಂಸ್ಕೃತಿ ತೋರಿಸುತ್ತದೆ. ಇಂತಹ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕಳಸಾ ನಾಲೆ ವೀಕ್ಷಿಸಿದ ಗೋವಾ ಶಿವಸೇನೆ
ಪಣಜಿ: ಗೋವಾ ಶಿವಸೇನೆ ಮಂಡಳವು ಕಣಕುಂಬಿಗೆ ತೆರಳಿ ಕಳಸಾ- ಬಂಡೂರಿ ನಾಲೆ ಕಾಮಗಾರಿ ಪರಿಶೀಲನೆ ನಡೆಸಿತು. ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಇತ್ತೀಚೆಗೆ ಕರ್ನಾಟಕಕ್ಕೆ ಬರೆದ ಪತ್ರವನ್ನು ಆಧಾರ ವಾಗಿಟ್ಟುಕೊಂಡು ಕರ್ನಾಟಕವು ಕಳಸಾ- ಬಂಡೂರಿ ನಾಲೆ ಕಾಮಗಾರಿ ಆರಂಭಿಸಿದೆ. ಇದಕ್ಕೆ ಸಂಪೂರ್ಣ ಪರ್ರಿಕರ್ ಅವರೇ ಹೊಣೆ ಎಂದು ಶಿವಸೇನೆ ಆರೋಪಿಸಿದೆ.
ಮಂಗಳವಾರ ಕಣಕುಂಬಿಗೆ ತೆರಳಿದ ಗೋವಾ ಶಿವಸೇನೆ ಪ್ರಮುಖರು ಅಲ್ಲಿನ ಜನತೆಯನ್ನು ಹಾಗೂ ಕೃಷಿಕರನ್ನು ಭೇಟಿ ಮಾಡಿ ಚರ್ಚಿಸಿದರು. ಕಳಸಾ- ಬಂಡೂರಿ ನಾಲೆಯಿಂದ ನಮಗೇನೂ ಲಾಭವಿಲ್ಲ ಎಂದು ಕಣಕುಂಬಿ ಭಾಗದ ಜನ ಹೇಳಿದ್ದು, ಈ ಕಾಲುವೆ ನಿರ್ಮಾಣಕ್ಕೆ ಕೃಷಿ ಜಮೀನನ್ನು ಕಳೆದುಕೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು ಎಂದು ಗೋವಾ ಶಿವಸೇನೆ ಪ್ರಮುಖ ಜಿತೇಶ್ ಕಾಮತ್ ಮಾಹಿತಿ ನೀಡಿದರು.
ವಾರಕ್ಕೊಮ್ಮೆ ಪರಿಶೀಲಿಸಲು ಗೋವಾದಿಂದ ತಂಡ ರಚನೆ ಪಣಜಿ: ಕಳಸಾ ಬಂಡೂರಿ ನಾಲೆಯ ಪರಿಸರವನ್ನು ವಾರಕ್ಕೊಮ್ಮೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಮಂಗಳವಾರ 4 ಎಂಜಿನಿಯರ್ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ. ಗೋವಾದ ಎಂಜಿನಿಯರ್ಗಳಾದ ಎಸ್.ಡಿ. ಪಾಟೀಲ್, ಗೋಪಿನಾಥ ದೇಸಾಯಿ, ಸುರೇಶ್
ಬಾಬು, ದಿಲೀಪ ನಾಯ್ಕ ಅವರ ತಂಡ ಪ್ರತಿ ವಾರ ಕ್ಕೊಮ್ಮೆ ಕಣಕುಂಬಿ ಭಾಗಕ್ಕೆ ತೆರಳಿ ಅಲ್ಲಿನ ಕಳಸಾ- ಬಂಡೂರಿ ನಾಲೆಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಮಹದಾಯಿ ನದಿ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲಿ ಗೋವಾ ಜಲಸಂಪನ್ಮೂಲ ಖಾತೆ ಮುಖ್ಯ ಎಂಜಿನಿಯರ್ ಸಂದೀಪ ನಾಡಕರ್ಣಿ ದುಬೈ ಪ್ರವಾಸಕ್ಕೆ ತೆರಳಿರುವ ಹಿನ್ನೆಲೆ ಅವರ ಎಲ್ಲ ಜವಾಬ್ದಾರಿಯನ್ನು ಸಹಾಯಕ ಮುಖ್ಯ ಎಂಜಿನಿಯರ್ ಪಿ.ಜೆ. ಕಾಮತ್ರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ನೀವು ಮಾಡಿದ ತಪ್ಪಿಗೆ ನಮ್ಮನ್ಯಾಕೆ ದೂರುತ್ತೀರಾ?: ಯಡಿಯೂರಪ್ಪ
ಕುಡಿಯುವ ನೀರಿಗಾಗಿ ಅಗತ್ಯವಿರುವ 7.56 ಟಿಎಂಸಿ ನೀರನ್ನು ಬಿಡಲು ತಾತ್ವಿಕವಾಗಿ ಗೋವಾ ಸಿದ್ಧವಿರುವುದಾಗಿ ಹೇಳಿದೆ. ಆದರೆ, ನೀವು 14 ಟಿಎಂಸಿ ನೀರಿನ ಬಗ್ಗೆ ಮಾತುಕತೆ ಎನ್ನುತ್ತೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಸಚಿವ ಎಂ.ಬಿ.ಪಾಟೀಲ್ಗೆ ತಿರುಗೇಟು ನೀಡಿದ್ದಾರೆ. ಇದರ ಜತೆಗೆ ಗೋವಾ ಕಾಂಗ್ರೆಸಿಗರು ನೀರು ಬಿಡದಂತೆ ಹೋರಾಟ ಮಾಡುತ್ತಿದ್ದಾರೆ. ಬೆಂಕಿ ಯಾರು ಹಚ್ಚಿದ್ದೆಂದು ರಾಜ್ಯದ ಜನತೆಗೆ ಗೊತ್ತಿಲ್ಲವೆಂದು ಭಾವಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನೀವು ಮಾಡಿದ ತಪ್ಪಿಗೆ ನಮ್ಮನ್ಯಾಕೆ ದೂರುತ್ತೀರಾ? ಕುಡಿಯುವ ನೀರು ಬಿಡುವ ಬಗ್ಗೆ ಗೋವಾ ಮುಖ್ಯಮಂತ್ರಿಯಿಂದ ಒಪ್ಪಿಗೆ ಪಡೆದರೆ, ನೀವು ಸಂಪೂರ್ಣ ನೀರು ಕೇಳಿದಿರಿ. ಒಂದೇ ಸಭೆಯಲ್ಲಿ ಇತ್ಯರ್ಥಪಡಿಸಬೇಕು ಎಂಬ ಷರತ್ತು ವಿಧಿಸಿದಿರಿ. ಇದೆಲ್ಲ ಮಾಡಿದ್ದು ಜನರ ಹಿತದೃಷ್ಟಿಯಿಂದಲಾ? ರಾಜಕೀಯ ಲಾಭಕ್ಕಾ ಎಂಬುದನ್ನು ವಿವರಿಸಿ ಪಾಟೀಲರೇ? ಎಂದಿದ್ದಾರೆ.
ಮಾನ್ಯ ಯಡಿಯೂರಪ್ಪನವರೆ, ನಿಮಗೆ ಅರಳು ಮರಳು ಆಗುತ್ತಿರಬಹುದು, ನಮಗಲ್ಲ. ನೀವು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ನೀವಾಗಲಿ ನಾವಾಗಲಿ, ನಾಡಿನ ವಿಷಯದಲ್ಲಿ ಗಂಭೀರತೆ ತೋರಿಸಬೇಕಾಗುತ್ತದೆ. ನಿಮ್ಮ ನಡವಳಿಕೆಯನ್ನು ಇಡೀ ರಾಜ್ಯ ಗಮನಿಸುತ್ತಿದೆ.
●ಎಂ.ಬಿ. ಪಾಟೀಲ್, ಜಲ ಸಂಪನ್ಮೂಲ ಸಚಿವ
ಕುಡಿಯುವ ನೀರಿಗಾಗಿ ದೇಶದ ಯಾವುದೇ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಕೇಂದ್ರದ ಮೋದಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯೋ ಕೆಲಸ ಮಾಡುತ್ತಿದೆ. ಮಧ್ಯಪ್ರದೇಶದ ವಿರೋಧದ ನಡುವೆಯೂ ಗುಜರಾತಿಗೆ ನರ್ಮದಾ ನದಿ ನೀರು ತಂದಿದ್ದಾರೆ. ಮಹಾನದಿ ವಿಚಾರದಲ್ಲಿ ಜಾರ್ಖಂಡ್ಗೆ ಮೋಸ ಮಾಡಿ ಒಡಿಶಾಕ್ಕೆ ನೀರು ಬಿಟ್ಟಿದ್ದಾರೆ. ಈಗ ಕರ್ನಾಟಕದ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ.
●ಬಿ.ಕೆ. ಹರಿಪ್ರಸಾದ್, ರಾಜ್ಯಸಭಾ ಸದಸ್ಯ
ಮಹದಾಯಿ ವಿಚಾರದಲ್ಲಿ ಗೋವಾ ನೀರಾವರಿ ಸಚಿವರು ಹದ್ದು ಮೀರಿ ವರ್ತಿಸಬಾರದು. ಕರ್ನಾಟಕದ ಜನತೆ ಮನಸ್ಸು
ಮಾಡಿದರೆ ಗೋವಾದ ಆರ್ಥಿಕ ಸ್ಥಿತಿ ಏನಾಗುತ್ತದೆ ಎಂಬುದರ ಅರಿವು ಇರಲಿ. ರಾಜ್ಯ ಸರ್ಕಾರವೂ ಮಹದಾಯಿ ವಿಚಾರದಲ್ಲಿ ಕಾನೂನು ಹೋರಾಟ ಹಾಗೂ ಇತರೆ ತೀರ್ಮಾನ ಕೈಗೊಳ್ಳುವಾಗ ಎಚ್ಚರಿಕೆ ಹೆಜ್ಜೆ ಇಡಬೇಕು.
●ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ