ವಿಶ್ವಾಸ ಇದ್ರೆ ಸಿಗುತ್ತೆ ಸಾಲ
Team Udayavani, Feb 15, 2018, 10:00 AM IST
ಅಹಮದಾಬಾದ್: ಹಣಕಾಸು ಸಂಸ್ಥೆಗಳಲ್ಲಿ ಸಾಲ ಬೇಕೆಂದಿದ್ದರೆ ಎಷ್ಟು ದಾಖಲೆಗಳು ಇದ್ದರೂ ಸಾಲದು. ಆದರೆ ಅಹಮದಾಬಾದ್ನ ಕಾಲುಪುರ್ ಸಹಕಾರಿ ಬ್ಯಾಂಕ್ ಕೇವಲ ವಿಶ್ವಾಸಕ್ಕೆ ಒಳಪಟ್ಟು ಸಾಲ ವಿತರಣೆ ಮಾಡುತ್ತಿದೆ. ಅದೂ ಯಾರಿಗೆ ಗೊತ್ತೇ? ಅಲೆಮಾರಿ ಜನಾಂಗಕ್ಕೆ ಸೇರಿದ ವರಿಗೆ. ಮೈಕ್ರೋಫೈನಾನ್ಸ್ ಯೋಜನೆ ಯಡಿ 4,500 ಖಾತೆಗಳನ್ನು ಈ ಬ್ಯಾಂಕ್ನಲ್ಲಿ ತೆರೆಯಲಾ ಗಿದೆ. ಈ ಪೈಕಿ 600 ಖಾತೆಗಳು ಅಲೆಮಾರಿ ಜನಾಂಗದವರಿಗೆ ಸಾಲ ವಿತರಿಸಿದ್ದೇ ಆಗಿದೆ. ದೇಶದಲ್ಲಿಯೇ ಇಂಥ ಬ್ಯಾಂಕ್ ಮೊದಲನೇಯದ್ದು ಎಂದು “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಈ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ ಅಲೆಮಾರಿ ಜನಾಂಗದವರಿಗೆ ಗುರುತಿ ಚೀಟಿ ಬಿಡಿ, ವಿಳಾಸವನ್ನು ದೃಢೀಕರಿಸುವ ವ್ಯವಸ್ಥೆ ಕೂಡ ಇಲ್ಲ. 2006ನೇ ಇಸ್ವಿಯಿಂದ ಈಚೆಗೆ 1 ಸಾವಿರ ಮಂದಿಗೆ 50 ಸಾವಿರ ರೂ. ವರೆಗೆ ಸಾಲ ವಿತರಿಸಿದೆ. ಸರ್ಕಾರಿ ಯೋಜನೆಯ ಅನ್ವಯ ಸಿಗುವ ಮನೆ ಖರೀದಿದಾಗಿ ಅದನ್ನು ಅವರು ಬಳಸಿಕೊಂಡಿದ್ದಾರೆ. ಸಣ್ಣ ರೀತಿಯ ವ್ಯಾಪಾರಕ್ಕಾಗಿ 25 ಸಾವಿರ ರೂ. ಸಾಲ ನೀಡಿದೆ. ಅದಕ್ಕೆ ಶೇ.10ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಇದಕ್ಕೆಲ್ಲ ಮುಖ್ಯ ಸೂತ್ರ ಧಾರ ಸಂಸ್ಥೆ ವಿಚಾರತಾ ಸಮುದಾಯ ಸಮರ್ಥನ್ ಮಂಚ್ (ವಿಎಸ್ಎಸ್ಎಂ) ಎಂಬ ಸಂಸ್ಥೆ. 15 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆ ಅಲೆಮಾರಿ ಜನಾಂಗ ದವರ ಶ್ರೇಯೋಭಿವೃದ್ಧಿ ಗಾಗಿ ಕೆಲಸ ಮಾಡುತ್ತಿದೆ.
ಕಾಲುಪುರ್ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಅಂಬುಭಾಯ್ ಪಟೇಲ್ (76) ವಿಎಸ್ಎಸ್ಎಂ ಸಹಕಾರದೊಂದಿಗೆ ಬ್ಯಾಂಕ್ ಖಾತೆ ತೆರೆದು, ಹಣ ಹೂಡಿಕೆ ಮಾಡುವ ಅಭ್ಯಾಸ ಅಲೆಮಾರಿಗಳಿಗೆ ಕಲಿಸಿಕೊಟ್ಟಿದ್ದಾರೆ. ಮಂಚ್ನ ಕಾರ್ಯಕರ್ತರು ಸಾಲ ಮರು ಪಾವತಿ ಮತ್ತು ಇತರ ಹಣಕಾಸಿನ ಅರಿವು-ನೆರವನ್ನು ಅವರಿಗೆ ನೀಡುತ್ತಿದ್ದಾರೆ.