ಸಿಎಂ ದುರಾಡಳಿತ ನಿರ್ನಾಮಕ್ಕೆ ದಿನ ನಿಗದಿ
Team Udayavani, Mar 31, 2018, 6:20 AM IST
ಮೈಸೂರು/ಕೊಳ್ಳೇಗಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಾಡಳಿತವನ್ನು ನಿರ್ನಾಮ ಮಾಡಲು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಬೂತ್ಮಟ್ಟದ ಪ್ರತಿನಿಧಿಗಳು ಬಿಜೆಪಿಗೆ ಪೂರ್ಣ ಬಹುಮತ ತಂದು ಕೊಡುವ ಸಂಕಲ್ಪ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ಶುಕ್ರವಾರ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಹಾಗೂ ಮೈಸೂರಿನಲ್ಲಿ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮೇ 12ರಂದು ಒಂದೇ ಹಂತದಲ್ಲಿ ಮತದಾನ ಘೋಷಣೆಯಾಗಿದ್ದು, ಮೇ15 ರಂದು ಮತ ಎಣಿಕೆ ಸಂದರ್ಭದಲ್ಲಿ ಸಿದ್ದು ಮನೆ ಕಡೆಗೆ, ಬಿಎಸ್ವೈ ಮುಖ್ಯಮಂತ್ರಿ ಗದ್ದುಗೆಗೆ ಏರಲಿದ್ದಾರೆ ಎಂದು ಭವಿಷ್ಯ ನುಡಿದರು.
ಭ್ರಷ್ಟಾಚಾರ ಮತ್ತು ಹಿಂಸಾಚಾರದ ಪ್ರತಿರೂಪವಾದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೂಗೆಯಲು ಜೆಡಿಎಸ್ಗೆ ಸಾಮರ್ಥ್ಯವಿಲ್ಲ. ಹೀಗಾಗಿ ಬಿಜೆಪಿ ಗೆಲ್ಲಿಸಿ, ಕರ್ನಾಟಕದ ವಿಕಾಸಕ್ಕೆ ಸಹಕರಿಸಿ ಎಂದರು.
ಬಿಜೆಪಿಗೆ ಸೇರ್ಪಡೆ
ಇದೇ ಸಂದರ್ಭದಲ್ಲಿ ಮೈಸೂರು ಮಹಾ ನಗರಪಾಲಿಕೆ ಸದಸ್ಯ ಸಂದೇಶ್ ಸ್ವಾಮಿ,ವಿಧಾನಪರಿಷತ್ ಸದಸ್ಯ ಸಂದೇಶ್
ನಾಗರಾಜ್ ಪುತ್ರ ಸಂದೇಶ್, ಮಹದೇವಪ್ಪ,ರಾಮಕೃಷ್ಣ ಅವರು ಬಿಜೆಪಿ ಸೇರಿದರು. ಅಮಿತ್ ಶಾ ಅವರು ಕೇಸರಿ ಶಲ್ಯ ಹಾಕುವ ಮೂಲಕ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಎಸ್ಸಿ, ಎಸ್ಟಿ, ಓಬಿಸಿಗೆ ಅನ್ಯಾಯ
ಚಾಮರಾಜನಗರ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಎಸ್ಸಿ,ಎಸ್ಟಿ, ಓಬಿಸಿ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ 123 ಕೋಟಿ ರೂ.ನೀಡಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ 513 ಕೋಟಿ ರೂ.ನೀಡುತ್ತಿದೆ ಎಂದು ಅಮಿತ್ ಶಾ ಆರೋಪಿಸಿದರು.
ಎಸ್ಟಿ ಸಮಾವೇಶದಲ್ಲಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್ಸಿ,ಎಸ್ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಕೇವಲ 123 ಕೋಟಿ ರೂ.ಗಳನ್ನು ಸ್ಕಾಲರ್ಶಿಪ್ಗಾಗಿ ನೀಡಲಾಗುತ್ತಿದೆ. ಇದು ಅನ್ಯಾಯ ಮತ್ತು ಮೋಸವಲ್ಲವೇ? ಅಲ್ಪಸಂಖ್ಯಾತರ ಮಕ್ಕಳಿಗೆ ಹೆಚ್ಚಿನ ಸ್ಕಾಲರ್ಶಿಪ್ ನೀಡಲು ನಮ್ಮ ವಿರೋಧವಿಲ್ಲ.ಹಾಗೆಯೇ ಎಸ್ಟಿ, ಎಸ್ಸಿ ಮಕ್ಕಳಿಗೂ ನೀಡಬೇಕು ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 24 ಮಂದಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರ ಹತ್ಯೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರನ್ನು ಹತ್ಯೆ ಮಾಡಿದವರು ಪಾತಾಳದಲ್ಲಿ ಅಡಗಿದ್ದರೂ ಹಿಡಿದು ಜೈಲಿಗೆ ಹಾಕಿ, ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ