ಅಪಾಯದಲ್ಲಿ ಕಳತ್ತೂರು – ಗುರ್ಮೆ ಸೇತುವೆ
Team Udayavani, Jul 22, 2018, 6:00 AM IST
ಕಾಪು: ಕಾಪು – ಶಿರ್ವ ರಸ್ತೆಯ ಚಂದ್ರನಗರದಿಂದ ಕಳತ್ತೂರು – ಗುರ್ಮೆ – ಪೈಯ್ಯಾರು – ಬೆಳಪು ನಡುವಿನ ಪ್ರಧಾನ ಸಂಪರ್ಕ ಸೇತುವಾಗಿರುವ ಗುರ್ಮೆ ಸೇತುವೆಯ ಒಂದು ಪಾರ್ಶ್ವದ ತಡೆಗೋಡೆಯ ಕೆಳಭಾಗದ ಅಡಿಪಾಯ ಕುಸಿದು ಸೇತುವೆ ಮೇಲಿನ ಸಂಚಾರವು ಸ್ಥಳೀಯರಲ್ಲಿ ಅಪಾಯದ ಭೀತಿ ಸೃಷ್ಟಿಸಿದೆ.
ಕಾಪು – ಶಿರ್ವ ಲೋಕೋಪಯೋಗಿ ರಸ್ತೆ ನಡುವಿನ ಚಂದ್ರನಗರ ಮೂಲಕವಾಗಿ ಕಳತ್ತೂರು, ಸೂರ್ಯಗುಡ್ಡೆ, ಪಡುಕಳತ್ತೂರು, ಪೈಯ್ನಾರು, ಎಲ್ಲೂರು, ಇರಂದಾಡಿ ಮತ್ತು ಬೆಳಪುವಿಗೆ ತೆರಳುವ ನೂರಾರು ಮಂದಿಗೆ ಈ ಸೇತುವೆಯ ಮುಖ್ಯ ಸಂಪರ್ಕ ಸೇತುವಾಗಿದೆ. ಅದೂ ಅಲ್ಲದೇ ಶಿರ್ವ, ಕಾಪು, ಕಳತ್ತೂರು, ಚಂದ್ರನಗರಗಳಲ್ಲಿರುವ ಶಾಲಾ – ಕಾಲೇಜುಗಳಿಗೆ ತೆರಳುವ 6-7 ವಾಹನಗಳೂ ಪ್ರತೀ ನಿತ್ಯ ಈ ಸೇತುವೆ ಮೂಲಕವಾಗಿ ಸಂಚಾರ ನಡೆಸುತ್ತಿರುತ್ತವೆ. ಆದರೆ ಈಗ ಗುರ್ಮೆ ಸೇತುವೆಯ ತಡೆಗೋಡೆಯ ಅಡಿಪಾಯ ಕುಸಿದಿರುವುದರಿಂದ ಜನರಲ್ಲಿ ಸಂಪರ್ಕ ಕಡಿತದ ಭೀತಿ ಎದುರಾಗಿದೆ.
ಬ್ಯಾರಿಕೇಡ್ ಇಟ್ಟು ಎಚ್ಚರಿಕೆ
ಕಳೆದ ಎರಡು ತಿಂಗಳ ಅವಧಿಯಲ್ಲಿ ಸುರಿದ ಮಹಾಮಳೆ, ಅದರಿಂದಾಗಿ ಎರಡೆರಡು ಬಾರಿ ಉಂಟಾದ ನೆರೆಯ ಕಾರಣದಿಂದಾಗಿ ಸೇತುವೆಯು ನೆರೆ ನೀರಿನಲ್ಲಿ ಮುಳುಗಿ ಹೋಗುವಂತಾಗಿತ್ತು. ಎರಡು ತಿಂಗಳ ಅಂತರದಲ್ಲಿ ನೀರಿನಲ್ಲಿ ಮುಳುಗಿ ತೇಯ್ದು ಹೋಗಿದ್ದ ಸೇತುವೆಯ ಒಂದು ಭಾಗವು ಪೂರ್ಣ ಹೊಳೆಯೊಳಗೆ ಕುಸಿದಿರುವ ವಿಚಾರವನ್ನು ಸ್ಥಳೀಯರು ಉದಯವಾಣಿಯ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸ್ಥಳೀಯರು ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್ಗೂ ಮಾಹಿತಿ ನೀಡಿದ್ದು ಸೇತುವೆ ಮೇಲೆ ಬ್ಯಾರಿಕೇಡ್ಗಳನ್ನು ಇರಿಸಿ ಸಾರ್ವಜನಿಕರನ್ನು ಎಚ್ಚರಿಸುವ ಪ್ರಯತ್ನ ನಡೆದಿದೆ.
ತತ್ಕ್ಷಣ ಎಚ್ಚೆತ್ತುಕೊಳ್ಳದಿದ್ದಲ್ಲಿ ಸೇತುವೆಯೇ ಮುರಿದೀತು
ಸುಮಾರು 15 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಗುರ್ಮೆ ಸೇತುವೆಯ ಕಾಂಕ್ರೀಟ್ ರಸ್ತೆ ಮತ್ತು ಸೇತುವೆ ತಡೆಗೋಡೆಯ ನಡುವಿನ ಕಲ್ಲು ಮತ್ತು ಕಾಂಕ್ರಿಟ್ ಹೊಳೆಯೊಳಗೆ ಹುದುಗಿ ಹೋಗಿದ್ದು, ಅಪಾಯಕಾರಿ ಹೊಂಡವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಸೇತುವೆಯ ಒಂದು ಪಾರ್ಶ್ವದ ತಡೆಗೋಡೆ ಕಂಬವು ಟೊಳ್ಳಾಗಿ ಮುರಿದು ಬೀಳುವ ಮುನ್ಸೂಚನೆಯನ್ನು ನೀಡುತ್ತಿದೆ. ಒಂದು ವೇಳೆ ಕಂಬ ಮುರಿದು ಬಿದ್ದರೆ ಇಡೀ ಸೇತುವೆಯೇ ಧರಾಶಾಯಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಸ್ಥಳೀಯರು.
ಯಾವುದೇ ತುರ್ತು ಕಾಮಗಾರಿ ನಡೆದಿಲ್ಲ
ಗುರ್ಮೆ ಸೇತುವೆ ಅಪಾಯದಲ್ಲಿ ಇರುವ ಬಗ್ಗೆ ಈಗಾಗಲೇ ಶಾಸಕರು, ಜಿ.ಪಂ., ತಾ.ಪಂ., ಗ್ರಾ.ಪಂ. ಸಹಿತ ವಿವಿಧ ಹಂತಗಳ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದು ಜನಪ್ರತಿನಿಧಿಗಳು ಬಂದು ನೋಡಿ ಹೋಗಿದ್ದಾರೆ. ತಹಶೀಲ್ದಾರ್ ಸಹಿತ ವಿವಿಧ ಅಧಿಕಾರಿಗಳು ಬಂದು ಹೋಗಿದ್ದಾರೆ. ಸೇತುವೆ ಕುಸಿದು ಎರಡು ವಾರ ಕಳೆದರೂ ಯಾವುದೇ ತುರ್ತು ಕಾಮಗಾರಿ ನಡೆದಿಲ್ಲ. ಪ್ರಕೃತಿ ವಿಕೋಪ ನಿಧಿಯಡಿ ತುರ್ತಾಗಿ ಕಾಮಗಾರಿ ನಡೆಸಿದಲ್ಲಿ ಹೆಚ್ಚಿನ ನಷ್ಟ ತಪ್ಪಿಸಲು ಸಾಧ್ಯ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
ತುರ್ತು ಕಾಮಗಾರಿ ನಡೆಯಲಿ
ಕಳತ್ತೂರು ಗುರ್ಮೆ ಹೊಳೆಯ ಅಗಲ ಕಿರಿದಾಗಿದ್ದು, ಕಸ ಕಡ್ಡಿ ಮತ್ತು ಮರದ ತುಂಡುಗಳು ಶೇಖರಣೆಗೊಂಡ ಪರಿಣಾಮ ನೀರು ಸರಾಗವಾಗಿ ಹರಿದು ಹೋಗಲು ತೊಂದರೆಯುಂಟಾಗುತ್ತಿದೆ. ಜೋರಾಗಿ ಮಳೆ ಬಂದ ಸಂದರ್ಭ ಕೃತಕ ನೆರೆ ಭೀತಿ ಉಂಟಾಗಿ ಸೇತುವೆಯ ಇಕ್ಕೆಲಗಳಲ್ಲಿ ನೆರೆ ನೀರು ಶೇಖರಣೆಗೊಂಡ ಪರಿಣಾಮ ಜು. 8ರ ಮಳೆಯ ಬಳಿಕ ಸೇತುವೆಯ ಗೋಡೆ ಕುಸಿದಿದೆ. ಸೇತುವೆ ಮೇಲಿನ ಸಂಚಾರ ಅಪಾಯಕಾರಿಯಾಗಿದ್ದು ಸಂಬಂಧಪಟ್ಟವರು ತತ್ಕ್ಷಣ ಎಚ್ಚೆತ್ತುಕೊಂಡು ತಾತ್ಕಾಲಿಕ ತಡೆಗೋಡೆಯನ್ನು ಕಟ್ಟಿ ಇಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಡಬೇಕಿದೆ.
– ಪ್ರವೀಣ್ ಕುಮಾರ್ ಗುರ್ಮೆ,
ಸ್ಥಳೀಯರು, ಕಳತ್ತೂರು
ಶೀಘ್ರ ದುರಸ್ತಿ ಭರವಸೆ
ಗುರ್ಮೆ ಸೇತುವೆಯ ದುರಸ್ತಿಯ ಬಗ್ಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ನೀಡಲಾಗಿದೆ. ಈ ಬಗ್ಗೆ ಪಿಆರ್ಡಿ ಇಲಾಖೆಯ ಎಂಜಿನಿಯರ್ಗಳು ಬಂದು ಪರಿಶೀಲನೆ ಮಾಡಿ ಅಂದಾಜು ಕ್ರಿಯಾ ಯೋಜನಾ ಪಟ್ಟಿ ತಯಾರಿಸಿದ್ದಾರೆ. ಗ್ರಾಮೀಣ ಜನರ ನಡುವಿನ ಸಂಪರ್ಕ ಸೇತುವಾಗಿರುವ ಈ ಸೇತುವೆಯನ್ನು ಆದಷ್ಟು ಶೀಘ್ರ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ.
– ರಜನಿ,ಪಿಡಿಒ
ಕುತ್ಯಾರು ಗ್ರಾ.ಪಂ.