ಮೊದಲ ಸಲ ಹಾಡಿದ ಲಹರಿ ವೇಲು
Team Udayavani, Sep 17, 2018, 11:04 AM IST
ಲಹರಿ ವೇಲು ಬೆರಳೆಣಿಕೆ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದು ಗೊತ್ತು. ಆದರೆ, ಹಾಡಿದ್ದು ಗೊತ್ತಾ? ಅವರು ಇದೇ ಮೊದಲ ಸಲ ಹಾಡಿದ್ದಾರೆ. ಹೌದು, “ಇರುವುದೊಂದೇ ಜನ್ಮ ನೀ ಸಹಾಯ ಮಾಡು ತಮ್ಮ’ ಎಂಬ ಹೆಸರಿನ ಆಲ್ಬಂಗೆ ಧ್ವನಿಯಾಗಿದ್ದಾರೆ. “ಸ್ವಾರ್ಥದಿಂದ ಬದುಕೋದು ಬ್ಯಾಡ ಮನುಸ, ಬದುಕೋದಿಲ್ಲ ನಾವಿಲ್ಲಿ ಕೋಟಿ ವರುಸ..’ ಎಂಬ ಅರ್ಥಪೂರ್ಣ ಹಾಡಿಗೆ ವೇಲು ಮೊದಲ ಸಲ ಹಾಡಿದ್ದಾರೆ.
ಅಂದಹಾಗೆ, ಈ ಹಿಂದೆ “ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ’ ಹಾಡು ಬರೆದಿದ್ದ ನಮ್ ರಿಷಿ ಈ ಹಾಡು ಬರೆದಿದ್ದಾರೆ. ಅಭಿಮನ್ರಾಯ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಯು ಟ್ಯೂಬ್ನಲ್ಲಿ ಈ ಹಾಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಮೊದಲ ಸಲ ಗಾಯಕರೆನಿಸಿಕೊಂಡಿರುವ ಲಹರಿ ವೇಲು, ಹೇಳುವುದಿಷ್ಟು. “ನಾನು ಗಾಯಕನಲ್ಲ. ಹೊಸ ಪ್ರತಿಭೆಗಳನ್ನು ಪರಿಚಯಿಸುವವನಷ್ಟೇ.
ನಾಲ್ಕು ದಶಕಳಿಂದ ಲಕ್ಷಾಂತರ ಹಾಡುಗಳನ್ನು ಬಿಡುಗಡೆ ಮಾಡಿದ ಹೆಮ್ಮೆ ನನ್ನ ಸಂಸ್ಥೆಯದ್ದು. ಎಲ್ಲೋ ಗೆಳೆಯರ ಜೊತೆಗೆ ಪ್ರವಾಸ ಹೋದ ಖುಷಿಯಲ್ಲಿ ಜಾನಪದ ಗೀತೆಗಳನ್ನು ಗುನುಗುತ್ತಿದ್ದೆ. ಅದು ಬಿಟ್ಟರೆ, ಹಾಡುಗಾರನಲ್ಲ. ಒಳ್ಳೆಯ ಹಾಡು ಗುನುಗುವ ಹವ್ಯಾಸವಿತ್ತು. ನನಗೆ ಬಂಡಾಯ ಸಾಹಿತಿಗಳ ಹಾಡುಗಳೆಂದರೆ ಇಷ್ಟ. ಅವುಗಳನ್ನು ಹೆಚ್ಚು ಗುನುಗುತ್ತಿದ್ದೆ. ಅದು ಬಿಟ್ಟರೆ, ಮನಸ್ಸಿಗೆ ಹತ್ತಿರವಾಗುವ, ಮೌಲ್ಯ ಇರುವಂತಹ ಹಾಡು ಕೇಳಿ ಮನದಲ್ಲೇ ಹಾಡುತ್ತಿದ್ದೆ.
ಒಮ್ಮೆ ಸಂಗೀತ ನಿರ್ದೇಶಕ ಅಭಿಮನ್ರಾಯ್ ಕಚೇರಿಗೆ ಬಂದಿದ್ದರು. ಅದೇ ವೇಳೆ ಗೀತರಚನೆಕಾರ ನಮ್ ರಿಷಿ ಕೂಡ ಇದ್ದರು. ಚರ್ಚೆ ಮಾಡುವಾಗ, ನೀವೊಂದು ಹಾಡು ಹಾಡಿ ಅಂದರು. ಅಲ್ಲೆ ಇದ್ದ ರಿಷಿ ನಾನು ಹಾಡು ಬರೆಯುತ್ತೇನೆ, ಅಭಿಮನ್ ಸಂಗೀತ ಸಂಯೋಜಿಸುತ್ತಾರೆ ನೀವು ಹಾಡಿ ಅಂತ ಒತ್ತಡ ತಂದರು. ಪ್ರಯತ್ನ ಮಾಡೋಣ ಅಂದೆ.
ಆದರೆ, ಅದು ಅಷ್ಟೊಂದು ಚೆನ್ನಾಗಿ ಮೂಡಿಬಂದು, ಯುಟ್ಯೂಬ್ನಲ್ಲಿ ಮೆಚ್ಚುಗೆ ಸಿಗುತ್ತೆ ಅಂದುಕೊಂಡಿರಲಿಲ್ಲ. ಎರಡು ದಿನ ಒಂದೊಂದು ಗಂಟೆಯಂತೆ ಕೇವಲ ಎರಡು ಗಂಟೆಯಲ್ಲಿ ಹಾಡಿದ್ದೇನೆ. ಹಾಡುವುದು ಅನಿವಾರ್ಯ ಕರ್ಮ ನನಗೆ ಅನ್ನುತ್ತಲೇ ಹಾಡಿದೆ. ನಾನು ಲಕ್ಷಾಂತರ ಗಾಯಕರ ಹಾಡು ಕೇಳಿದ್ದೆ. ಆ ಸ್ವರಗಳು ಕಿವಿಯಲ್ಲಿದ್ದವು. ಹಾಗಾಗಿ, ಸಂಗೀತ ನಿರ್ದೇಶಕರು ಹೇಳಿದಂತೆ ಹಾಡಿದ್ದೇನಷ್ಟೇ. ಆ ಹಾಡಲ್ಲಿ ತತ್ವ ಇದೆ.
ಬದುಕಿನ ಸಾರವಿದೆ. ಹಾಗಾಗಿ ಹಾಡುವ ಮನಸ್ಸು ಮಾಡಿದ್ದೇನೆ. ನನ್ನ ಹಾಡು ಅಮೆರಿಕ, ದುಬೈ, ಸಿಂಗಾಪುರದಲ್ಲೂ ಮೆಚ್ಚುಗೆ ಪಡೆಯುತ್ತಿದೆ. ಈ ಮೂಲಕ ಗಾಯಕನನ್ನಾಗಿಸಿದೆ ಎಂಬ ಖುಷಿ ನನಗಿದೆ. ಹಾಗಂತ ನಾನು ಕಮರ್ಷಿಯಲ್ ಹಾಡು ಹಾಡೋದಿಲ್ಲ. ಈ ರೀತಿಯ ಮೌಲ್ಯವಿರುವ ಸಾಹಿತ್ಯವಿದ್ದರೆ ಹಾಡುವ ಪ್ರಯತ್ನ ಮಾಡ್ತೀನಿ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ವೇಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ