ಕುಕ್ಕೆ ದೇಗುಲದ ಹೆಸರು ಬಳಕೆಗೆ ಕೋರ್ಟ್ ತಡೆ
Team Udayavani, Nov 6, 2018, 8:52 AM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರು, ದೇವರ ಚಿತ್ರ, ಉತ್ಸವ ಮೂರ್ತಿ, ರಥೋತ್ಸವ, ಪ್ರವೇಶಗೋಪುರ, ಎಂಬ್ಲೆಮ್ ಹಾಗೂ ಕ್ಷೇತ್ರದ ಹೆಸರನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀಗಳು, ಅವರ ಟ್ರಸ್ಟ್ ಗಳು ಅಥವಾ ಸಂಬಂಧಿಕರು ಎಲ್ಲೂ ಬಳಸದಂತೆ ಸುಳ್ಯ ಜೆಎಂಎಫ್ ನ್ಯಾಯಾಲಯ ತಾತ್ಕಾಲಿಕ ಅದೇಶ ನೀಡಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯ
ಸರಕಾರದ ಅಧೀನಕ್ಕೆ ಒಳಪಟ್ಟಿದ್ದು, ಧಾರ್ಮಿಕ ದತ್ತಿ ಕಾಯಿದೆ ಅನ್ವಯಿಸು ತ್ತದೆ. ಆದ್ದರಿಂದ ದೇವಸ್ಥಾನದ ಹೆಸರಿನಲ್ಲಿ ವೈಯಕ್ತಿಕ ಸೇವೆ, ಕಾಣಿಕೆ ಅಥವಾ ದೇಣಿಗೆ ಸಂಗ್ರಹ ಮಾಡು ವುದು ಅಪರಾಧವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ ಲಾಜಿಕ್ ಎಂಬ ಸಂಸ್ಥೆ ಹುಟ್ಟು ಹಾಕಿರುವ ಮೂರ್ನಾಲ್ಕು ಖಾಸಗಿ ವೆಬ್ಸೈಟ್ಗಳ ವಿರುದ್ಧ ಮತ್ತು ದೇವಸ್ಥಾನದಲ್ಲಿ ನಡೆಯುವ ಸೇವೆಗಳನ್ನು ಸುಬ್ರಹ್ಮಣ್ಯ ಮಠ ಎಂದು ಹೇಳಿ ನರಸಿಂಹ ಮಠ ದಲ್ಲಿ ನಡೆಸುತ್ತಿರುವ ಕುರಿತು ದ.ಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿತ್ತು. ಸುಳ್ಯ ನ್ಯಾಯಾಲಯದಲ್ಲೂ ದಾವೆ ಹೂಡಲಾಗಿತ್ತು. ಅದಕ್ಕೆ ನ್ಯಾಯಾಲಯ ತಾತ್ಕಾಲಿಕ ತೀರ್ಪು ನೀಡಿದೆ ಎಂದರು.
ವಕೀಲ ಸುಧಾಕರ ನೆಟ್ಟಾರು ಮಾತ ನಾಡಿ, ಮಠಕ್ಕೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲವೆಂದು ಅನೇಕ ಬಾರಿ ನ್ಯಾಯಾಲಯಗಳು ತೀರ್ಪಿನಲ್ಲಿ ಹೇಳಿವೆ. ಆದಾಗ್ಯೂ ದೇವಸ್ಥಾನವನ್ನು ವಶಕ್ಕೆ ಪಡೆಯುವ ಪ್ರಯತ್ನವನ್ನು ಮಠ ನಡೆಸುತ್ತಿದೆ. ಕಾನೂನಿನಲ್ಲಿ ಸಾಧ್ಯವಾಗದಾಗ ರಾಜ ಕೀಯವಾಗಿ ಮಾಡುವ ಯತ್ನವೂ ನಡೆಯುತ್ತಿದೆ. ಎಲ್ಲದಕ್ಕೂ ಕಾನೂನಿನ ಮೂಲಕವೇ ಉತ್ತರಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ ಎಚ್., ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಲ್ಲೇರಿ, ಮಹೇಶ್ ಕೆ. ಕರಿಕ್ಕಳ, ಕೃಷ್ಣಮೂರ್ತಿ ಭಟ್, ರಾಜೀವಿ ಆರ್. ರೈ, ದಮಯಂತಿ ಕೂಜುಗೋಡು, ಮಾಧವ ಡಿ., ಮಾಸ್ಟರ್ ಪ್ಲಾನ್ ಸಮಿತಿಯ ಶಿವರಾಮ ರೈ, ಸತೀಶ್ ಕೂಜುಗೋಡು, ಬಾಲ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.