ಸಿದ್ದಗಂಗಾಶ್ರೀಗಳ ಆರೋಗ್ಯ ಗಂಭೀರ; ಮಠದ ಸುತ್ತ ಭದ್ರತೆ, ಗಣ್ಯರ ದೌಡು
Team Udayavani, Jan 21, 2019, 4:30 AM IST
ತುಮಕೂರು: ನಡೆದಾಡುವ ದೇವರು ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸೋಮವಾರ ಮತ್ತೆ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ಮಠದತ್ತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ತ್ರಿವಿಧ ದಾಸೋಹಿ ಸಿದ್ದಗಂಗಾಶ್ರೀಗಳ ಅನಾರೋಗ್ಯದ ವಿಚಾರ ಭಕ್ತರಲ್ಲಿ ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಭಕ್ತರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು. ಶ್ರೀಗಳು ಕ್ಷೇಮವಾಗಿದ್ದಾರೆ ಎಂದು ವೈದ್ಯ ಪರಮೇಶ್ ಅವರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಸಿದ್ದಗಂಗಾಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದ್ದ ವಿಷಯ ತಿಳಿದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿರೇಕೆರೂರು ಪ್ರವಾಸ ರದ್ದುಗೊಳಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡಾ ಬರ ಅಧ್ಯಯನ ಪ್ರವಾಸ ರದ್ದುಗೊಳಿಸಿ ತುಮಕೂರಿನತ್ತ ದೌಡಾಯಿಸಿದ್ದಾರೆ.
ಸಿದ್ದಗಂಗಾಶ್ರೀಗಳ ಬಿಪಿ, ಶ್ವಾಸಕೋಶದಲ್ಲಿ ಭಾರೀ ಏರುಪೇರಾಗಿದೆ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ..ನಾವು ನೀಡುತ್ತಿರುವ ಚಿಕಿತ್ಸೆ ಫಲಕಾರಿಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಅವರ ಆರೋಗ್ಯ ತುಂಬಾ ಗಂಭೀರವಾಗಿದೆ..ವೈದ್ಯರ ತಂಡ ಸೇರಿಕೊಂಡು ಚಿಕಿತ್ಸೆ ಕೊಡುತ್ತಿದ್ದೇವೆ. ಇನ್ನೊಂದು ಎರಡು ಗಂಟೆಯಲ್ಲಿ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಿದ್ದಗಂಗಾಮಠಕ್ಕೆ ಪ್ರವೇಶ ನಿರ್ಬಂಧ:
ಸಿದ್ದಗಂಗಾಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಸಿದ್ದಗಂಗಾಮಠಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಕೇವಲ ಆಪ್ತರಿಗಷ್ಟೇ ಮಠದೊಳಕ್ಕೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಗಣ್ಯರ ದಂಡು:
ಸಿದ್ದಗಂಗಾಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಠಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ್, ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಎಂಬಿ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಗಣ್ಯಾತೀಗಣ್ಯರು ಭೇಟಿ ನೀಡಿದ್ದಾರೆ.