ಶ್ರೀಕಂಠನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
Team Udayavani, Mar 5, 2019, 7:51 AM IST
ನಂಜನಗೂಡು: ಮಹಾಶಿವರಾತ್ರಿ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಸೋಮವಾರ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದು ಬಂದಿತು. ಕಪಿಲೆ ನದಿಯಲ್ಲಿ ಮಿಂದೆದ್ದು, ಸರದಿಯಲ್ಲಿ ನಿಂತು ಶ್ರೀಕಂಠನ ದರ್ಶನ ಪಡೆದು ಧನ್ಯತೆ ಮೆರೆದರು.
ಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗಿನ ಜಾವ 4.30ರಿಂದ ರುದ್ರಾಭಿಷೇಕ, ಬಿಲ್ವಪತ್ರೆ ಅಭಿಷೇಕ, ಪಂಚತೀರ್ಥಗಳ ಅಭಿಷೇಕ, ಪಂಚಾಮೃತಾಭಿಷೇಕ, ಶಾಲ್ಯಾನ್ನ ಅಭಿಷೇಕ ಮತ್ತಿತರ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ದೇವಾಲಯದಲ್ಲಿ 30 ಹಾಗೂ 100 ರೂ. ಗಳ ವಿಶೇಷ ದರ್ಶನವನ್ನು ಸೋಮವಾರ ರದ್ದುಪಡಿಸಲಾಗಿತ್ತು. ಭಕ್ತರಿಗೆ ದೇವರ ದರ್ಶನಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಇಒ ಕುಮಾರಸ್ವಾಮಿ, ಗಂಗಯ್ಯ ಸ್ವತಃ ತಾವೇ ಮುಂದೆ ನಿಂತು ಭಕ್ತರ ನೇರ ದರ್ಶನಕ್ಕೆ ಅನುಕೂಲ ಕಲ್ಪಿಸಿದರು.
ನಂಜನಗೂಡಿನ ಹೊರವಲಯದ ಶರಣ ಸಂಘ ಮಠದಲ್ಲಿ ರುದ್ರಾಕ್ಷಿಯಿಂದ ಅಲಂಕೃತಗೊಂಡ 108 ಶಿವಲಿಂಗಗಳು ಭಕ್ತರ ಮನಸೂರೆಗೊಂಡವು. ಚಿಕ್ಕಯ್ಯನ ಛತ್ರದ ಶ್ರೀ ಪ್ರಸನ್ನ ನಂಜುಂಡೇಶ್ವರ, ಕಪಿಲಾ ತೀರದ ಲಿಂಗಾಭಟ್ಟರ ಕಾಶಿ ವಿಶ್ವನಾಥ ದೇವಾಲಯ, ಕಪಿಲೆ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.