ಕಾಡಾನೆ ದಾಳಿಗೆ ವ್ಯಕ್ತಿ ಬಲಿ
Team Udayavani, May 4, 2019, 6:05 AM IST
ಸಾಂದರ್ಭಿಕ ಚಿತ್ರ.
ಮಡಿಕೇರಿ: ಕಾಫಿ ಬೆಳೆಗಾರರೊಬ್ಬರು ಕಾಡಾನೆ ದಾಳಿಗೆ ಬಲಿಯಾದ ದುರ್ಘಟನೆ ಶ್ರೀಮಂಗಲ ಬಳಿಯ ಕಾಯಿಮಾನೆ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಸ್ಥಳೀಯ ಕಾಫಿ ಬೆಳೆಗಾರರಾದ 42 ವರ್ಷ ಪ್ರಾಯದ ಚೋಕಿರ ಸುಧಾ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ನತದೃಷ್ಟರು. ಬೆಳಗ್ಗೆ ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ರಸ್ತೆ ಬಳಿಯ ತೋಟದಿಂದ ಏಕಾಏಕಿ ನುಗ್ಗಿಬಂದ ಕಾಡಾನೆ ಚೋಕಿರ ಸುಧಾ ಅವರನ್ನು ಸೊಂಡಿಲಿನಿಂದ ತಿವಿದಿದ್ದು, ತೀವ್ರ ಗಾಯಗೊಂಡ ಚೋಕಿರ ಸುಧಾ ಸ್ಥಳದಲ್ಲೇ ಸಾವನ್ನಪ್ಪಿದರು.
ವಿಷಯ ತಿಳಿದ ರೈತಸಂಘ ಸಂಘಟನೆಗಳ ಪ್ರಮುಖರು ಮತ್ತು ಗ್ರಾಮಸ್ಥರು ಜಮಾಯಿಸಿ ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರೈತಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಮತ್ತು ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮತ್ತು ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿದರು. ಕಾಡಾನೆಯ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಕಾಡಾನೆ ದಾಳಿಯಿಂದ ಮೃತಪಟ್ಟ ಚೋಕಿರ ಸುಧಾ ಅವರ ಕುಟುಂಬ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿದರು.