ಸಚಿವ ಸ್ಥಾನ ಸಿಗದಿದ್ದಕ್ಕೆ ರಾಮದಾಸ್ ಅಸಮಾಧಾನ
Team Udayavani, Aug 27, 2019, 3:03 AM IST
ಮೈಸೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕ ರಾಮದಾಸ್ ಅಸಮಾಧಾನಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. ದಸರಾ ಉತ್ಸವದ ಗಜಪಡೆ ಸ್ವಾಗತ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಲು ರಾಮದಾಸ್ ಅವರಿಗೆ ಬೆಳಗ್ಗೆಯಿಂದ ದೂರವಾಣಿ ಕರೆ ಮಾಡುತ್ತಿದ್ದೇನೆ. ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನುವ ಮೂಲಕ ಸಚಿವ ಸ್ಥಾನ ಸಿಗದಿರುವುದಕ್ಕೆ ರಾಮದಾಸ್ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಸ್ವತಃ ವಿ.ಸೋಮಣ್ಣ ಒಪ್ಪಿಕೊಂಡರು.
28ರಂದು ಮತ್ತೆ ಮೈಸೂರಿಗೆ ಬರುತ್ತೇನೆ. ಅಂದು ರಾಮದಾಸ್ ಅವರನ್ನು ಭೇಟಿ ಮಾಡಿ ಮನವೊಲಿಸುತ್ತೇನೆ. ದಸರಾ ವರ್ಷಕ್ಕೆ ಒಮ್ಮೆ ಮಾತ್ರ ಬರುವುದು. ಎಲ್ಲರೂ ಸೇರಿ ಆಚರಿಸಬೇಕು. ರಾಮದಾಸ್ ಮುನಿಸು ಬಿಟ್ಟು ಮುಂದಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆಂಬ ವಿಶ್ವಾಸವಿದೆ ಎಂದರು.
ಸೋಮವಾರ ಅರಮನೆಗೆ ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಬರುವಂತೆ ಖುದ್ದು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೇ ಜಿಲ್ಲೆಯ ಎಲ್ಲ ಶಾಸಕರಿಗೂ ದೂರವಾಣಿ ಕರೆ ಮಾಡಿ ಆಹ್ವಾನಿಸಿದರೂ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ, ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಮಹದೇವ ಹೊರತುಪಡಿಸಿ ಜಿಲ್ಲೆಯ ಬೇರ್ಯಾವ ಶಾಸಕರೂ ಬರಲಿಲ್ಲ.