ಮದುವೆ ಪೌರೋಹಿತ್ಯಕ್ಕೆ ನಕಾರ ಪ್ರಕರಣ; ಪುರೋಹಿತರು ದೋಷಮುಕ್ತಿ
Team Udayavani, Aug 31, 2019, 3:46 PM IST
ಕುಂದಾಪುರ: ಕುಂದಾಪುರ ಸಮೀಪದ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಪರಿಶಿಷ್ಟ ವರ್ಗದವರ ಮದುವೆ ಮಾಡಲು ನಿರಾಕರಿಸಿ ದಲಿತ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದ ಗುಜ್ಜಾಡಿ ಗ್ರಾಮದ ಪುರೋಹಿತ ಕೃಷ್ಣಮೂರ್ತಿ ಭಟ್ಟ ಯಾನೆ ಬಾಬಣ್ಣ ಭಟ್ಟ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2013ರ ಜೂನ್ 5ರಂದು ಅಣ್ಣಪ್ಪಯ್ಯ ಸಭಾಭವನದಲ್ಲಿ 12-30ರ ವಿವಾಹ ಮುಹೂರ್ತದಲ್ಲಿ ಸಾವಿರಕ್ಕೂ ಹೆಚ್ಚು ಅತಿಥಿಗಳು ಬಂದಿದ್ದಾಗ ಆರೋಪಿಯು ರಾದ್ಧಾಂತ ಮಾಡಿದ್ದರು. ಇದರಿಂದ ಅವಮಾನಿತಗೊಂಡ ವಧುವಿನ ಅಣ್ಣ ಗಂಗೊಳ್ಳಿ ಠಾಣೆಗೆ ದೂರು ನೀಡಿದಾಗ ಬಾಬಣ್ಣ ಭಟ್ಟರನ್ನು ಪೊಲೀಸರು ಬಂಧಿಸಿದ್ದರು.
ಅಂದು ಕುಂದಾಪುರದ ಡಿವೈಎಸ್ಪಿ ಯಶೋದಾ ಒಂಟಿಗೋಡಿ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ತನಗೆ ಪರಿಶಿಷ್ಟ ವರ್ಗದವರ ಮದುವೆ ಮಾಡಿದ ಅನುಭವ ಇಲ್ಲದ ಕಾರಣ ವಿವಾಹದ ಪುರೋಹಿತ್ಯ ಮಾಡಿಲ್ಲವೆಂದು ಭಟ್ಟರು ಸಮರ್ಥಿಸಿಕೊಂಡಿದ್ದರು. ಉಡುಪಿಯ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ನೀಡಿದ ಈ ಪ್ರಕರಣದಲ್ಲಿ ಬಾಬಣ್ಣ ಭಟ್ಟರ ಪರವಾಗಿ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.