ಕೃಷ್ಣಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ
ತಾಲೂಕು ಆಡಳಿತ ಕಟ್ಟೆಚ್ಚರ•21 ಜನ ಅಧಿಕಾರಿಗಳ ತಂಡ ರಚನೆ•ಕಂಗಾಲಾದ ಜನತೆ
Team Udayavani, Sep 7, 2019, 4:16 PM IST
ದೇವದುರ್ಗ: ಹೂವಿನಹೆಡಗಿ ಸೇತುವೆ ಸಮೀಪಿಸುತ್ತಿರುವ ಕೃಷ್ಣಾ ನದಿ ನೀರು.
ದೇವದುರ್ಗ: ಕೃಷ್ಣಾ ನದಿಗೆ ಶುಕ್ರವಾರ 1.84 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಯಾದಗಿರಿ ಜಿಲ್ಲೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಹೂವಿನಹೆಡಗಿ ಬಳಿ ಸೇತುವೆ ಮುಳುಗಡೆಯಾಗಲು ಅರ್ಧ ಅಡ್ಡಿ ಭಾಕಿ ಉಳಿದಿದೆ. ಕೃಷ್ಣಾ ನದಿಗೆ ಇನ್ನೂ ನೀರು ಬಿಡುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಇದೀಗ ಮುಳುಗಡೆಯಾಗಿದೆ. ಕೊಪ್ಪರು ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ತಾಲೂಕು ಆಡಳಿತ ಕಟ್ಟೆಚ್ಚರ ಜತೆ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಜಾಗೃತಿ ಮೂಡಿಸಲಾಗಿದೆ. ಜುಲೈ ಅಂತ್ಯದಿಂದ ಆಗಸ್ಟ್ ಎರಡನೇ ವಾರದವರೆಗೆ ಕೃಷ್ಣಾನದಿ ಅಬ್ಬರಕ್ಕೆ ನದಿ ತೀರದ ನಿವಾಸಿಗಳ ಬದುಕು ದಿಕ್ಕುತಪ್ಪಿತ್ತು. 15 ದಿನ ಪ್ರವಾಹದಿಂದ ನಲುಗಿದ ಕೃಷ್ಣಾ ನದಿ ತೀರದ ಮನೆಗಳು ಜಲಾವೃತವಾಗಿದ್ದವು. ಜಮೀನಿಗೆ ನೀರು ನುಗ್ಗಿ ಸಾವಿರಾರು ಎಕರೆ ಬೆಳೆ ಹಾನಿಗೀಡಾಗಿತ್ತು. ಮನೆ-ದನಕರಗಳನ್ನು ಬಿಟ್ಟು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನದಿ ತೀರದ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ತೆರಳಿ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಪ್ರವಾಹ ಭೀತಿ ಶುರುವಾಗಿದೆ.
ದೇವಸ್ಥಾನ ಮುಳುಗಡೆ: ಕೃಷ್ಣಾ ನದಿಗೆ 1.84 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟದ್ದರಿಂದ ಗಡ್ಡೆಗೊಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಕೊಪ್ಪರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗುತ್ತಿದೆ. ಭಕ್ತರಿಗೆ ಪೂಜೆ ಪುನಸ್ಕಾರ ಮಾಡಲು ಅಡಚರಣೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅಧಿಕಾರಿಗಳ ತಂಡ ರಚನೆ: ಕೃಷ್ಣಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಹೀಗಾಗಿ ತಾಲೂಕು ಆಡಳಿತ ಕಟ್ಟೆಚ್ಚರವಹಿಸಲು ತಾಲೂಕು ಮಟ್ಟದ 21 ಅಧಿಕಾರಿಗಳು ತಂಡ ರಚಿಸಲಾಗಿದೆ. ನದಿ ತೀರದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳಿಗೆ ತಮ್ಮ ಗ್ರಾಮ ಬಿಟ್ಟು ಹೋಗದಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.