ವಿವಿಧೆಡೆ ಶಮೀ ವೃಕ್ಷಕ್ಕೆ ವಿಶೇಷ ಪೂಜೆ
ಮಲ್ಲಯ್ಯಪಲ್ಲಕ್ಕಿ ಉತ್ಸವಪರಸ್ಪರ ಬನ್ನಿ ವಿನಿಮಯದೇವಿ ದರ್ಶನ ಪಡೆದ ಭಕ್ತ ಸಮೂಹ
Team Udayavani, Oct 10, 2019, 12:01 PM IST
ಹುಣಸಗಿ: ರಾಜನಕೋಳೂರ ಗ್ರಾಮದಲ್ಲಿ ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಮಲ್ಲಯ್ಯ ಪಲ್ಲಕ್ಕಿ ಉತ್ಸವ ಭಕ್ತ ಸಾಗರ ನಡುವೆ ಮಂಗಳವಾರ ಅದ್ಧೂರಿಯಾಗಿ ನಡೆಯಿತು.
ಇತಿಹಾಸ ಹೊಂದಿರುವ ರಾಜನಕೋಳುರ ಗ್ರಾಮದಲ್ಲಿ ಭಾವೈಕ್ಯತೆಯ ಸಂಕೇತವಾಗಿ ಆಚರಿಸಿಕೊಂಡು ಬಂದಿರುವ ಮಲ್ಲಯ್ಯ ಜಾತ್ರೆ ವಿಶೇಷವಾಗಿ ಕಂಡು ಬಂದಿತು.
ಮಂಗಳವಾರ ಬೆಳಗ್ಗೆ ಪ್ರಾರಂಭವಾದ ಮಲ್ಲಯ್ಯ ಪಲ್ಲಕ್ಕಿ ಉತ್ಸವ ಬನ್ನಿ ಮಂಟಪಕ್ಕೆ ತೆರಳಿತು. ಮೆರವಣಿಗೆಯಲ್ಲಿ ಸುಮಂಗಲೆಯರು ಭಕ್ತಿಯಿಂದ ಭಂಡಾರವನ್ನು ಪಲ್ಲಕ್ಕಿ ಮೇಲೆ ಹಾಕುತ್ತಾ ಸಾಗಿದರು. ಬನ್ನಿ ಮಂಟಪಕ್ಕೆ ತೆರಳಿದ ಪಲ್ಲಕ್ಕಿಗೆ ವಿಶೇಷ ಪೂಜೆ ನಡೆದು ಶಮಿ ವೃಕ್ಷದ ಪೂಜೆಯೊಂದಿಗೆ ಪುನಃ ಮಲ್ಲಯ್ಯನ ಮೆರವಣಿಗೆ ಆಂಜನೇಯ ದೇವಸ್ತಾನ ಕಡೆ ಸಾಗಿ ತನ್ನ ಮೂಲ ಸ್ಥಾನಕ್ಕೆ ತಲುಪಿತು.
ಇಲ್ಲಿ ನಡೆದ ವಿಶೇಷ ಮಂಗಳಾರುತಿಯೊಂದಿಗೆ ಮಲ್ಲಯ್ಯನ ಪಲ್ಲಕ್ಕಿ ಉತ್ಸವ ಮುಗಿದ ನಂತರವೇ ದಸರಾ ಉತ್ಸವಕ್ಕೆ ಚಾಲನೆ ದೊರಕಿತು. ಈ ಉತ್ಸವದಲ್ಲಿ ಪ್ರಮುಖರು ಪಾಲ್ಗೊಂಡು ಐಕ್ಯತೆ ಮೆರದರು. ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಉತ್ಸವಕ್ಕೆ ಆಗಮಿಸಿದ್ದರು.
ಉತ್ಸವದಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಸಿ. ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು, ಪ್ರಭುಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಉಮಾದೇವಿ ಉಳ್ಳೇಸೂರ, ರಾಮನಗೌಡ ವಠಾರ, ಡಾ| ಬಸನಗೌಡ ಅಳ್ಳಿಕೋಟೆ, ಸಂಗನಗೌಡ ಮಾಗನೂರ, ಭೀಮನಗೌಡ ಗುಳಬಾಳ, ಬಾಬುಗೌಡ ವಠಾರ, ರಾಮನಗೌಡ ಮೇಲ್ಮಾಳಗಿ, ತಿರುಪತಿ ಸಾಹುಕಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು
ಪಾಲ್ಗೊಂಡಿದ್ದರು.