ಹರಕೆ ಮೇಳ ಕಲಾವಿದರಿಗೆ ನೆರವು
Team Udayavani, Feb 3, 2020, 3:07 AM IST
ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿರುವ ಹರಕೆ ಮೇಳ ಕಲಾವಿದರ ಹಿತ ಕಾಯಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಮುಂದಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಹಲವು ದೇವಸ್ಥಾನಗಳು ಸೇರಲಿವೆ. ಆ ದೇವಸ್ಥಾನಗಳಲ್ಲಿ ಹರಕೆ ಮೇಳದ ಯಕ್ಷಗಾನ ಕಲಾ ತಂಡಗಳಿವೆ.
ಅಂತಹ ಮೇಳಗಳಲ್ಲಿ ಹಲವು ವರ್ಷಗಳಿಂದ ಬಣ್ಣ ಹಚ್ಚಿ ಕಲಾ ಪ್ರದರ್ಶನ ನೀಡುತ್ತಿರುವ ಕಲಾವಿದರಿಗೆ ಯಾವುದೇ ಜೀವನ ಭದ್ರತೆ ಇಲ್ಲ. ಈ ಹಿನ್ನೆಲೆಯಲ್ಲಿಯೇ ಆ ಕಲಾವಿದರ ಜೀವನ ಭದ್ರತೆ ರೂಪಿಸುವ ಸಂಬಂಧ ಸರ್ಕಾರ ಯೋಜನೆ ರೂಪಿಸಿ, ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರ ನೆರವಿಗೆ ಧಾವಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಲು ಯಕ್ಷಗಾನ ಅಕಾಡೆಮಿ ತೀರ್ಮಾನಿಸಿದೆ.
ಸುಮಾರು 30ರಿಂದ 40 ವರ್ಷ ಹರಕೆ ಮೇಳದ ಶ್ರೇಯೋಭಿವೃದ್ಧಿಗೆ ದುಡಿದ ಕಲಾವಿದ ರಿದ್ದಾರೆ. ಅಂತಹ ಕಲಾವಿದರ ಭವಿಷ್ಯಕ್ಕೆ ಬೆಳಕಾ ಗುವ ಯಾವುದೇ ರೀತಿಯ ಯೋಜನೆಗಳಿಲ್ಲ. ವಯಸ್ಸಾದ ನಂತರ ಅವರಿಗೆ ಜೀವನಕ್ಕೆ ಆಸರೆ ಎನ್ನುವುದು ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ಇಂತಹ ಹಲವು ಕಲಾವಿದರ ಭವಿಷ್ಯತ್ತಿಗೆ ಆಸರೆಯಾಗುವ ನಿಟ್ಟಿನಲ್ಲಿ ಯೋಜನೆಯನ್ನು ಮುಜರಾಯಿ ಇಲಾಖೆ ರೂಪಿಸಬೇಕು ಎಂದು ಮನವಿ ಮಾಡಿದೆ. ಜೀವವಿಮಾ ಸೌಲಭ್ಯ, ಪ್ರಾವಿಡೆಂಟ್ ಫಂಡ್, ಭವಿಷ್ಯ ನಿಧಿ ಯೋಜನೆ ಸೇರಿದಂತೆ ಮೇಳದ ಕಲಾವಿದರ ಭವಿಷ್ಯತ್ತಿನ ಹಿತ ಕಾಯುವಂತಹ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಯಕ್ಷಗಾನ ಅಕಾಡೆಮಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಕೆಲವು ಮೇಳಗಳಲ್ಲಿ ಕಲಾವಿದರಿಗೆ ವೇತನ ನೀಡುವ ವಿಚಾರದಲ್ಲಿ ತಾರತಮ್ಯ ಇದೆ. ಇದು ನಿವಾರಣೆಯಾಗಬೇಕು. ಕಲಾವಿದರ ಭವಿಷ್ಯತ್ತು ಸುಂದರವಾಗಿರಲು ಪಿಎಫ್ ನೀಡುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಆದಾಯ ಮೀಸಲಿಡಲಿ: ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಮಂದಾರ್ತಿ, ಕಟೀಲು, ಮಾರನಕಟ್ಟೆ ಸೇರಿದಂತೆ ಕರಾವಳಿ ಭಾಗದ ಹಲವು ದೇವಾಲಯಗಳಲ್ಲಿ ಹರಕೆ ಮೇಳಗಳಿವೆ. ಆ ಮೇಳಗಳಿಂದ ಸಾಕಷ್ಟು ಆದಾಯವಿದೆ. ಹರಕೆ ಮೇಳಗಳಿಂದ ಬರುವ ಆ ಆದಾಯವನ್ನು ಸಂಗ್ರಹಿಸಿಡುವುದಕ್ಕಿಂತ ಕಲಾವಿದರ ಜೀವನ ರೂಪಿಸಿಕೊಳ್ಳಲು ಮೀಸಲಿಡಲಿ.
ಆಗ ಖಾಸಗಿಯವರೂ ಇದನ್ನು ಅಳವಡಿಕೆ ಮಾಡಿಕೊಳ್ಳುತ್ತಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದರು. ಈಗಾಗಲೇ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದನ್ನು ಮುಜರಾಯಿ ಇಲಾಖೆ ಸಚಿವರ ಗಮನಕ್ಕೆ ತಂದಿದೆ. ಕಲಾವಿದರ ಭವಿಷ್ಯದ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ಸಿಕ್ಕಿದೆ ಎಂದರು.
ಸಮಿತಿ ರಚಿಸಿ ವರದಿ ನೀಡಲು ಸೂಚನೆ: ಈ ಹಿಂದೆ ಸಾಲಿಗ್ರಾಮದಲ್ಲಿರುವ ಹಂಗಾರು ಕಟ್ಟೆಯಲ್ಲಿ ಕಲಾವಿದರ ಸಮಾವೇಶ ನಡೆಯಿತು. ಆ ಸಮಾರಂಭಕ್ಕೆ ಮುಜರಾಯಿ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಆಗಮಿಸಿದ್ದರು. ಆ ವೇಳೆ, ಮೇಳದಲ್ಲಿರುವ ಕಲಾವಿದರ ಹಿತ ಕಾಯುವಂತಹ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆ ಸಮಾವೇಶದಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಹರಕೆ ಮೇಳದಲ್ಲಿರುವ ಯಕ್ಷಗಾನ ಕಲಾವಿದರ ಜೀವನಕ್ಕೆ ಯಾವುದೇ ಭದ್ರತೆಯಿಲ್ಲ. ಈ ಹಿನ್ನೆಲೆಯಲ್ಲಿ ಅವರ ಹಿತ ಕಾಯುವ ಯೋಜನೆಗಳನ್ನು ರೂಪಿಸುವಂತೆ ಮುಜರಾಯಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರ ಕಲಾವಿದರ ಒಳಿತಿಗಾಗಿ ಜೀವವಿಮೆ ಸೌಲಭ್ಯ, ಭವಿಷ್ಯ ನಿಧಿ ಯೋಜನೆ ರೂಪಿಸಿದರೆ ಮುಪ್ಪಿನ ಕಾಲದಲ್ಲಿ ಕಲಾವಿದರಿಗೆ ಆಸರೆ ಆಗಲಿದೆ.
-ಪ್ರೊ.ಎಂ.ಎ.ಹೆಗಡೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H.D. Revanna ಎಸ್ ಐಟಿ ವಶಕ್ಕೆ ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು