ಲಾಕ್ಡೌನ್ನಿಂದ ಕಾರ್ಮಿಕರಿಗೆ ಸಂಕಷ್ಟ
Team Udayavani, May 2, 2020, 4:15 PM IST
ಚಿಕ್ಕಮಗಳೂರು: ಸಿಪಿಐ ಕಚೇರಿಯಲ್ಲಿ ಕಾರ್ಮಿಕ ದಿನ ಆಚರಿಸಲಾಯಿತು.
ಚಿಕ್ಕಮಗಳೂರು: ಕೋವಿಡ್ ಸೋಂಕು ತಡೆಗಟ್ಟಲು ಸರ್ಕಾರ ವಿಧಿಸಿರುವ ಲಾಕ್ ಡೌನ್ ನಿರ್ಬಂಧದ ನೇರ ಪರಿಣಾಮ ದೇಶದ ಕಾರ್ಮಿಕರ ಮೇಲಾಗಿದೆ. ಎಲ್ಲಾ ವರ್ಗದ ಜನರಿಗಿಂತ ಹೆಚ್ಚಿನ ಕಷ್ಟವನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಗುಣಶೇಖರ್ ಹೇಳಿದರು.
ನಗರದ ಸಿಪಿಐ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸರಳ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಲುವುಗಳಿಂದಾಗಿ ಕಾರ್ಮಿಕರು, ಬಡವರು ನರಳುವಂತಾಗಿದ್ದು, ಅದರ ವಿರುದ್ಧ ಕಾರ್ಮಿಕ ಸಂಘಟನೆಗಳು ಒಂದಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್. ಎಂ.ರೇಣುಕಾರಾಧ್ಯ ಮಾತನಾಡಿ, ಮೇ ದಿನ ಆರಂಭಗೊಂಡು 134 ವರ್ಷಗಳು ಕಳೆದರೂ ಇನ್ನೂ ದೇಶದಲ್ಲಿ ದುಡಿಯುವ ವರ್ಗ ಬೇಡುವ ಸ್ಥಿತಿಯಲ್ಲಿದೆ. ಆಳುವ ವರ್ಗ ಐಷಾರಾಮಿಯಾಗಿ ಬದುಕುತ್ತಿದೆ ಎಂದು ವಿಷಾದಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಬಿ.ಅಮ್ಜದ್ ಮಾತನಾಡಿ, ದೇಶದಲ್ಲಿ ಇನ್ನೂ ಬಂಡವಾಳ ಶಾಹಿ ವ್ಯವಸ್ಥೆ ಮುಂದುವರಿಯುತ್ತಿರುವುದು
ಕಾರ್ಮಿಕರ ಸ್ಥಿತಿ ಶೋಚನೀಯವಾಗಿರುವುದು ದುರಂತ ಎಂದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಎಐಟಿಯುಸಿ ಜಿಲ್ಲಾಧ್ಯಕ್ಷ ಗುಣಶೇಖರ್ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ಜಿಲ್ಲಾ ಖಜಾಂಚಿ ವಿಜಯಕುಮಾರ್, ಸಹ ಕಾರ್ಯದರ್ಶಿ ರಘು, ಜಯಕುಮಾರ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ವಸಂತಕುಮಾರ್ ಇದ್ದರು.