11 ಜಿಲ್ಲೆಗೆ ತಲಾ 5 ಕೋ.ರೂ. ಬಿಡುಗಡೆ: ಆರ್. ಅಶೋಕ್
ಪ್ರಾಕೃತಿಕ ವಿಕೋಪ: ಅಗ್ನಿಶಾಮಕ ಇಲಾಖೆಗೆ 20 ಕೋ. ರೂ.
Team Udayavani, Aug 8, 2020, 8:45 AM IST
ಉಡುಪಿ: ಪ್ರಾಕೃತಿಕ ವಿಕೋಪ ನಿರ್ವಹಣೆಗಾಗಿ ಉಡುಪಿ, ದ.ಕ. ಜಿಲ್ಲೆ ಸೇರಿದಂತೆ ಒಟ್ಟು 11 ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ತಲಾ 5 ಕೋ.ರೂ. ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಪ್ರಕೃತಿ ವಿಕೋಪ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಹಾವೇರಿ, ಚಾಮ ರಾಜನಗರ, ಮೈಸೂರು, ಕೊಡಗು, ಧಾರವಾಡ, ಚಿಕ್ಕಮಗಳೂರು ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಗೊಳಿಸಲಾಗುವುದು ಎಂದರು.
ಬೋಟ್ ಇತ್ಯಾದಿ ಉಪಕರಣಗಳ ಖರೀದಿಗೆ ಅಗ್ನಿಶಾಮಕ ಇಲಾಖೆಗೆ 20 ಕೋ.ರೂ. ಬಿಡುಗಡೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಯಡಿ 3.5 ಕೋ.ರೂ. ಇದೆ. ಇದು ಕೊರೊನಾ, ಮನೆ ಹಾನಿ ನಿರ್ವಹಣೆಗೆ ಅಲ್ಲದೆ ಇರುವ ಮೊತ್ತವಾಗಿದೆ ಎಂದರು.
ಮನೆ ನಿರ್ಮಿಸಲು ಕಂತು ಬಿಡುಗಡೆ
ಕಳೆದ ವರ್ಷ ಪ್ರವಾಹ ಬಂದಾಗ ಸಂಪೂರ್ಣ ಮನೆ ನಷ್ಟವಾದವರಿಗೆ 5 ಲ.ರೂ., ಅರ್ಧ ಹಾನಿಯಾದವರಿಗೆ 3 ಲ.ರೂ. ಪರಿಹಾರವಾಗಿ ನೀಡಲಾಗಿದ್ದು ಇದು ಈ ವರ್ಷವೂ ಮುಂದುವರಿ ಯಲಿದೆ. ಇದಕ್ಕಾಗಿ ವಸತಿ ನಿಗಮಕ್ಕೆ 340 ಕೋ.ರೂ. ಬಿಡುಗಡೆ ಮಾಡಲಾಗಿದ್ದು ಜಿಲ್ಲಾಧಿಕಾರಿ, ತಹಶೀಲ್ದಾರ್ ಮೂಲಕ ಪಡೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಅಕ್ರಮಸಕ್ರಮ: ಅವಧಿ ವಿಸ್ತರಣೆ
53-54 ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸದವರು ಇನ್ನೂ ಅನೇಕರು ಇರುವುದರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗುವುದು ಎಂದರು.
ಡಿಕೆಶಿಗೆ ಸಿದ್ದು ಕಾಟ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ವಿರೋಧ ಪಕ್ಷದಲ್ಲಿ ಕುಳಿತಿರುವವರಿಗೆ ಕಾಮಾಲೆ ಕಣ್ಣಾಗಿದೆ. ಎಲ್ಲ ಸಚಿವರು ಜಿಲ್ಲೆಗಳಿಗೆ ಸಂಚಾರ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಕೆಲಸವಿಲ್ಲದೆ ಕೇವಲ ಟೀಕೆ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರರಿಗೆ ಬಿಜೆಪಿಗಿಂತ ಸಿದ್ಧರಾಮಯ್ಯನವರ ಕಾಟವೇ ಹೆಚ್ಚಾಗಿದೆ. ಅವರು ಈ ಸಮಸ್ಯೆಯಿಂದ ಹೊರಬರಲಿ ಎಂದರು.
ಬೊಮ್ಮಾಯಿಗೆ ದೊಡ್ಡ ಹೊಣೆ
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಸವರಾಜ ಬೊಮ್ಮಾಯಿಯವರು ಇಡೀ ರಾಜ್ಯಕ್ಕೆ ಗೃಹ ಸಚಿವರು, ಎರಡು ಜಿಲ್ಲೆಗಳ ಉಸ್ತುವಾರಿ ಇದೆ. ಅವರು ಶಾಸಕರು ಕರೆದಾಗ ಬಂದು ಹೋಗಿದ್ದಾರೆ. ಜಿಲ್ಲಾಧಿಕಾರಿಯವರ ಜತೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಇನ್ನೆರಡು
ದಿನಗಳಲ್ಲಿ ಬರುವವರಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿಯವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ರಘುಪತಿ ಭಟ್, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್ಪಿ ವಿಷ್ಣುವರ್ಧನ್, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರು ಇದ್ದರು.