“ನಾರಾಯಣ’ನ ವಿಜಯ ಯಾತ್ರೆ
ನಾಲ್ಕು ದಿನ ಚಿತ್ರಮಂದಿರಗಳಿಗೆ ಭೇಟಿ
Team Udayavani, Jan 5, 2020, 7:03 AM IST
“ಅವನೇ ಶ್ರೀಮನ್ನಾರಾಯಣ’ ಚಿತ್ರ ಈಗಾಗಲೇ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಭಾಷೆಯಲ್ಲೂ ಹೊಸ ಜಾನರ್ ಸಿನಿಮಾ ನೋಡಿದ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಕನ್ನಡದಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈಗ ಚಿತ್ರತಂಡ ವಿಜಯ ಯಾತ್ರೆ ಹೊರಟಿದ್ದು, ನಾಲ್ಕು ದಿನಗಳ ಈ ಯಾತ್ರೆಯಲ್ಲಿ ರಾಜ್ಯದ ಸುತ್ತಲಿದೆ ಚಿತ್ರತಂಡ.
ರಾಜ್ಯದ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು, ಚಿತ್ರಪ್ರೇಮಿಗಳ ಜೊತೆ ಕೆಲಹೊತ್ತು ಬೆರೆಯಲಿದೆ. ಈ ವಿಜಯ ಯಾತ್ರೆಯಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ, ಬಾಲಾಜಿ ಹಾಗೂ ಪ್ರಮೋದ್ ಶೆಟ್ಟಿ ಭಾಗಿಯಾಗಲಿದ್ದಾರೆ. ಶನಿವಾರ (ಜ.04)ಮಧ್ಯಾಹ್ನದಿಂದಲೇ ಚಿತ್ರತಂಡ ಥಿಯೇಟರ್ ಭೇಟಿಗೆ ಹೊರಟಿದ್ದು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿಗೆ ಭೇಟಿ ನೀಡಿದೆ. ಇನ್ನು, ಭಾನುವಾರ ಹುಬ್ಬಳ್ಳಿ-ಧಾರವಾಡದ ಕೆಲವು ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳಿಗೆ ಭೇಟಿ ನೀಡಲಿದೆ.
ಸೋಮವಾರ ಬೆಳಗ್ಗೆ ಉಡುಪಿ-ಮಂಗಳೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದು, ಮಂಗಳವಾರ ಅಂದರೆ ವಿಜಯ ಯಾತ್ರೆಯ ಕೊನೆಯ ದಿನ ಅಲ್ಲಿಂದ ಮೈಸೂರಿಗೆ ಆಗಮಿಸಲಿರುವ ಚಿತ್ರತಂಡ, ಮೈಸೂರು-ಮಂಡ್ಯದ ಚಿತ್ರಮಂದಿರಗಳಿಗೆ ತೆರಳಿ, ಬೆಂಗಳೂರಿಗೆ ವಾಪಾಸ್ಸಾಗಲಿದೆ. ರಕ್ಷಿತ್ ಶೆಟ್ಟಿ ನಾಯಕರಾಗಿರುವ ಈ ಚಿತ್ರವನ್ನು ಸಚಿನ್ ನಿರ್ದೇಶಿಸಿದ್ದು, ಪುಷ್ಕರ್ ನಿರ್ಮಾಣವಿದೆ.