Dubai ಗಡಿನಾಡ ಉತ್ಸವ-2023;ಕನ್ನಡ ಅಭಿಮಾನವನ್ನು ಮೆರೆಸುತ್ತಿರುವುದು ಸ್ತುತ್ಯಾರ್ಹ: ಹೊರಟ್ಟಿ
Team Udayavani, Dec 23, 2023, 10:29 AM IST
ದುಬೈ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ ವತಿಯಿಂದ ದುಬೈಯಲ್ಲಿ ದ್ವಿತೀಯ ಬಾರಿಗೆ “ದುಬೈ ಗಡಿನಾಡ ಉತ್ಸವ-2023′ ಜರಗಿತು.
ನಗರದ ಅಲ್ ಗಿಸಾಸ್ನ ವುಡ್ಲ್ಹಾಮ್ ಪಾರ್ಕ್ ಶಾಲೆಯ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ ಉದ್ಯೋಗವನ್ನರಸಿಕೊಂಡು ತಾಯ್ನಾಡಿನ ಕನ್ನಡ ನೆಲದಿಂದ ಬಂದ ಕನ್ನಡಿಗರು ಇಲ್ಲಿ ಸರ್ವರೊಳು ಒಂದಾಗಿ ಕನ್ನಡ ಭಾಷೆ, ಸಾಹಿತ್ಯ, ಅಭಿಮಾನವನ್ನು ಮೆರೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯ. ಗಡಿನಾಡ ಉತ್ಸವದಂತಹ ಕಾರ್ಯಕ್ರಮಗಳಿಗೆ ದುಬೈಗೆ ಬಂದರೂ ಇಲ್ಲಿನ ಕನ್ನಡ ಪ್ರೇಮ ಕಂಡಾಗ ಕರ್ನಾಟಕದ ಒಳಗಡೆಯೇ ಇರುವಂತೆ ಭಾಸವಾಗುತ್ತಿದೆ. ಇಲ್ಲಿನ ಕನ್ನಡ ಪ್ರೇಮ ಕರ್ನಾಟಕಕ್ಕೆ ಮಾದರಿಯಾಗಿದೆ.
ಭಾಷೆ, ಸಂಸ್ಕೃತಿ, ಪ್ರೋತ್ಸಾಹಕ್ಕಾಗಿ ಮತ್ತು ಅರಬ್ ರಾಷ್ಟ್ರಗಳಿಗೆ ಪ್ರೇರಣೆಯಾಗುವಂತೆ ಇಲ್ಲೊಂದು ಕನ್ನಡ ಭವನ ನಿರ್ಮಾಣಕ್ಕೆ ಮತ್ತು ಕನ್ನಡ ಕಾರ್ಯಕ್ರಮದ ಪ್ರೋತ್ಸಾಹಕ್ಕೆ ಸರಕಾರದೊಡನೆ ಚರ್ಚಿಸಿ ಸೂಕ್ತ ಅನುದಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾಷಾಭಿಮಾನ ದೇಶವನ್ನು ದಾಟಿದಾಗ ಉಂಟಾಗುವ ಅನುಭವ ನಿಜವಾದ ತಾಯ್ನಾಡಿನ ಮಮತೆ. ಇಲ್ಲಿ ನಡೆಯುವ ಕಾರ್ಯಕ್ರಮವು ಸೌಹಾರ್ದಯುತವಾಗಿ ನಡೆಯುವಲ್ಲಿ ಸರ್ವ ಧರ್ಮದ ಹಾಗೂ ಜನತೆಯ ಸಹಕಾರ ಪ್ರದಾನ ಕಾರಣವೆಂದರು.
ರಾಜ್ಯಸಭಾ ಸದಸ್ಯಡಾ| ಎಲ್. ಹನುಮಂತಯ್ಯ, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ವಿನ್ಯಾಸಗಾರ ರವೀಂದ್ರ ಕುಮಾರ್ , ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಎಣ್ಮಕಜೆ ಗ್ರಾ. ಪಂ. ಅಧ್ಯಕ್ಷ ಸೋಮಶೇಖರ ಜೆ ಎಸ್., ಮಾಜಿ ಉಪಾಧ್ಯಕ್ಷೆ ಎಎ ಆಯಿಷಾ ಪೆರ್ಲ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಸಮಾಜ ಸೇವಕ ಹರೀಶ್ ಬಂಗೇರ, ಸಂದೀಪ್ ಮೂಲ್ಕಿ, ಅಬುಲ್ ಸಲಾಂ ಚೇವಾರು ಅತಿಥಿಗಳಾಗಿದ್ದರು.
ಸಂಘಟಕ ಎ.ಆರ್. ಸುಬ್ಬಯ್ಯಕಟ್ಟೆ,ಝಡ್.ಎ.ಕಯ್ನಾರ್, ಇಬ್ರಾಹಿಂ ಬಾಜೂರಿ, ನವೀನ ಗೌಡ ಉಪಸ್ಥಿತರಿದ್ದರು. ಘಟಕದ ಪ್ರದಾನ ಕಾರ್ಯದರ್ಶಿ ಅಮರ್ ದೀಪ್ ಕಲ್ಲೂರಾಯ ಪ್ರಸ್ತಾವನೆಗೈದರು. ಗಡಿನಾಡ ಸಾಹಿತ್ಯ ಸಾಂಸðತಿಕ ಅಕಾಡೆಮಿ ದುಬೈ ಘಟಕದ ಅಧ್ಯಕ್ಷ ನ್ಯಾಯವಾದಿ ಇಬ್ರಾಹಿಂ ಖಲೀಲ್ ಸ್ವಾಗತಿಸಿದರು. ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ ವಂದಿಸಿದರು.
ಗಡಿನಾಡ ರತ್ನ ಪ್ರಶಸ್ತಿ ಪ್ರದಾನ
ಸಮಾಜ ಸೇವೆಯ ಸಾಧನೆಯನ್ನು ಗುರುತಿಸಿ ಜೋಸೆಫ್ ಮಥಾಯಸ್, ಉದ್ಯಮ ಕ್ಷೇತ್ರದಲ್ಲಿ ಅಶ್ರಫ್ ಮಂತೂರ್, ಆರ್ಥಿಕ ತಜ್ಞ ಸಿ.ಎ. ರಮಾನಂದ ಪ್ರಭು ಮಸ್ಕತ್ ಅವರಿಗೆ “ಗಡಿನಾಡ ರತ್ನ ಪ್ರಶಸ್ತಿ’ ಮತ್ತು ಸುಧಾಕರ ರಾವ್ ಪೇಜಾವರ, ಡಾ| ಮಲ್ಲಿಕಾರ್ಜುನ ಎಸ್. ನಾಸಿ, ಅಶ್ರಫ್ ಕಾರ್ಲೆ ಶಾಹುಲ್ ಹಮೀದ್ ತಂಗಳ್ ಮಾಳಿಗೆ, ಆಸೀಫ್ ಮೇಲ್ಪರಂಭ, ಫಾರೂಕ್ ಚಂದ್ರನಗರ ಉಡುಪಿ, ಕಲಿಮಾ ಫೌಂಡೇಶನ್ ಉಡುಪಿ ಇದರ ಅಧ್ಯಕ್ಷರಾದ ಡಾ| ಸಿಬಗತುಲ್ಲ ಶರೀಫ್ ಅವರಿಗೆ ಸಾಧಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಅಬ್ದುಲ್ಲ ಮಾದುಮೂಲೆ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಕಲಾವಿದರಿಂದ “ಮೋಹನ ಮುರಳಿ’ ಯಕ್ಷಗಾನ ನೃತ್ಯ ನಾಟಕ,ಯುಎಇಯ ಪ್ರಸಿದ್ಧ ನೃತ್ಯ ಕಲಾವಿದರಿಂದ “ನೃತ್ಯ ವೈಭವ’, ಯುಎಇಯಲ್ಲಿ ಇರುವ ಗಡಿನಾಡಿನ ಪ್ರಸಿದ್ಧ ಗಾಯಕ ಗಾಯಕಿಯರಿಂದ “ಸಂಗೀತ ರಸಸಂಜೆ’, ಹೆಣ್ಣು ಹುಲಿ ನೃತ್ಯ ಹಾಗೂ ದಫ್ ಮುಟ್ಟ್ ಕಾರ್ಯಕ್ರಮಗಳು ಜನಮನಸೂರೆಗೊಂಡವು.