ಆಯುಷ್ ವೈದ್ಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕ ಪಾಟೀಲರಿಗೆ ಮನವಿ
Team Udayavani, May 27, 2020, 2:04 PM IST
ಇಳಕಲ್ಲ: ರಾಜ್ಯ ಗುತ್ತಿಗೆ ಆಯುಷ್ ವೈದ್ಯರ ಹಾಗೂ ಆಯುಷ್(ಯುಜಿ ಮತ್ತು ಪಿಜಿ) ಶಿಷ್ಯವೇತನ ತಾರತಮ್ಯ ನಿವಾರಣೆ ಹಾಗೂ ಖಾಸಗಿ ಆಯುಷ್ ವೈದ್ಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಇಳಕಲ್ಲ ಘಟಕದ ಪದಾಧಿಕಾರಿಗಳು ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಎಲ್ಲ ವಿಭಾಗದ ಆಯುಷ್ ವೈದ್ಯರುಗಳ ವೇತನ ಹೆಚ್ಚಿಸುವ ಕುರಿತು ಮೇ 5ರಂದು ಸಾಂಕೇತವಾಗಿ ಕಪ್ಪು ಬಟ್ಟೆ ಧರಿಸಿ ಸೇವೆ ಮುಂದುವರಿಸಲಾಗಿತ್ತು. ಆದರೆ, ಸರಕಾರ ಸ್ಪಂದಿಸದೆ ಇರುವ ಕಾರಣದಿಂದ ಮೇ 23ರಿಂದಲೇ ಎಲ್ಲ ವಿಭಾಗದ ಗುತ್ತಿಗೆ ಆಯುಷ್ ವೈದ್ಯರು, ಆಯುಷ್ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸಾಮೂಹಿಕವಾಗಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈಗ ಕೋವಿಡ್-19 ತುರ್ತು ಸಮಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಖಾಸಗಿ ಆಯುಷ್ ವೈದ್ಯರು ಫೆವರ್ ಕ್ಲಿನಿಕ್ ಹಾಗೂ ಕ್ವಾರಂಟೈನ್ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಸರಕಾರಿ ಆಯುಷ್ ವೈದ್ಯರಿಗೆ ನೀಡಿರುವ ಆದೇಶವನ್ನು ಖಾಸಗಿ ವೈದ್ಯರಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಆಯುಷ್ ವೈದ್ಯರಾದ ಡಾ| ವಿಜಯಕುಮಾರ ಹಳ್ಳಿ, ಡಾ| ಎನ್.ವೈ. ಪತ್ತಾರ, ಡಾ| ಸಿ.ಎಸ್. ಭಾರಡ್ಡಿ, ಡಾ| ಪ್ರಕಾಶ ಭಸ್ಮೆ, ಡಾ| ಸಂತೋಷ ಪೂಜಾರಿ, ಡಾ| ಅವಿನಾಶ ಗುಳೇದ, ಡಾ| ವಿ.ವಿ. ಹಾದಿಮನಿ, ಚಂದ್ರಕಾಂತ ಬದ್ನಿ ಉಪಸ್ಥಿತರಿದ್ದರು.