ಜನಾಂಗದ ಕಲ್ಯಾಣಕ್ಕೆ ಒಗ್ಗಟ್ಟು ಅಗತ್ಯ: ಶರವಣ
Team Udayavani, May 12, 2019, 12:39 PM IST
ಗುಳೇದಗುಡ್ಡ: ಸಮಾಜದ ಜನರು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಸಶಕ್ತರಾಗಲು ಶಿಕ್ಷಣ ಅವಶ್ಯವಾಗಿದೆ. ಆರ್ಯವೈಶ್ಯ ಜನಾಂಗದ ಹೆಸರನ್ನು ಸರ್ಕಾರದ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್ಯವೈಶ್ಯ ಸಮಾಜದ ವಾಸವಿ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಚರಿಸಲು ಆಗ್ರಹಿಸಲಾಗಿದೆ ಎಂದು ಆರ್ಯವೈಶ್ಯ ಮಹಾಮಂಡಳ ರಾಜ್ಯಾಧ್ಯಕ್ಷ ಡಾ| ಟಿ.ಎ.ಶರವಣ್ ಹೇಳಿದರು.
ಪಟ್ಟಣದಲ್ಲಿ ಆರ್ಯವೈಶ್ಯ ಸೇವಾ ಸಮಿತಿ ವತಿಯಿಂದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ನೂತನ ದೇವಸ್ಥಾನ ಹಾಗೂ ರಾಧಾಬಾಯಿ ಕೃಷ್ಣಪ್ಪ ಧಾರವಾಡ ಕಲ್ಯಾಣ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು. ಜನಾಂಗವನ್ನು ಸರ್ಕಾರದ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಲಾಗಿದೆ.ಆರ್ಯವೈಶ್ಯ ಸಮಾಜದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಆರ್ಯವೈಶ್ಯ ಅಭಿವೃದ್ಧಿ ನಿಗಮ ಸರ್ಕಾರ ಘೋಷಿಸಿ ಹಣ ಮೀಸಲಿಟ್ಟಿದೆ ಎಂದರು.
ಸಮಾಜದ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ವರ್ಷಕ್ಕೆ 15 ಸಾವಿರ ರೂ. ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಮುರುಘಾಮಠದ ಕಾಶೀನಾಥ ಶ್ರೀ ಸಾನ್ನಿಧ್ಯ ವಹಿಸಿದ್ದರು. ನೂತನ ಕಲ್ಯಾಣ ಮಂಟಪದ ದಾನಿಗಳಾದ ರಾಧಾಬಾಯಿ ಧಾರವಾಡ, ಕೃಷ್ಣಪ್ಪ ಧಾರವಾಡ, ಸುವರ್ಣ ಬಿಜಾಪುರ, ಶ್ರೀನಿವಾಸ ಬೋನಗೇರ ಸನ್ಮಾನಿಸಲಾಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಸಮಾಜದ ಕಾರ್ಯಾಧ್ಯಕ್ಷ ಗಿರೀಶ ಪೆಂಡಕೂರ, ಹನಮಂತ ಅಗಡಿ, ವಾಸವಿ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಕಾಂತ ಧಾರವಾಡ, ಆರ್ಯವೈಶ್ಯ ಸಮಾಜ ಅಧ್ಯಕ್ಷ ರಾಮಣ್ಣ ಬಿಜಾಪುರ, ಅಪ್ಪು ಧಾರವಾಡ, ಹಣಮೇಶ ಬಿಜಾಪುರ, ಮಹೇಶ ಬಿಜಾಪುರ, ವಿಶ್ವನಾಥ ಪಾನಘಂಟಿ, ಸುಜಾತಾ ಬೋನಗೇರ ಇದ್ದರು.