ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ
Team Udayavani, May 27, 2020, 1:33 PM IST
ಗುಳೇದಗುಡ್ಡ: ಕೋವಿಡ್ ವೈರಸ್ದಿಂದ ಜನರು ಆರ್ಥಿಕವಾಗಿ ತತ್ತರಿಸಿದ್ದಾರೆ. ಆದರೆ, ಪುರಸಭೆ ಅಧಿಕಾರಿಗಳು ಆಸ್ತಿ ತೆರಿಗೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದ್ದಾರೆ.ಮೇಲಧಿಕಾರಿಗಳು ಈ ಆಸ್ತಿ ತೆರಿಗೆ ಹಾಗೂ ನೀರಿನ ಕರ ಪುನರ್ ಪರಿಶೀಲಿಸಬೇಕು ಎಂದು ಹಿರಿಯ ನಾಗರಿಕ ಪ್ರಜಾ ಜಾಗೃತ ವೇದಿಕೆ ಆಗ್ರಹಿಸಿದೆ.
ಪಟ್ಟಣದಲ್ಲಿ ಕೆಲವು ಕಡೆಗಳಲ್ಲಿ ನೀರಿಗೆ ಮೀಟರ್ ಜೋಡಣೆ ಮಾಡಿದ್ದಾರೆ. ಇನ್ನೂ ಕೆಲವು ಭಾಗಗಳಲ್ಲಿ ಮೀಟರ್ ಜೋಡಣೆ ಮಾಡಿಲ್ಲ. ಪುರಸಭೆ ಮೀಟರ್ ಜೋಡಣೆ ಮಾಡಿದವರಿಂದ ಅವರು ನೀರು ಬಳಸಿದ ಪ್ರಮಾಣದ ಮೇಲೆ ಕರ ವಸೂಲಿ ಮಾಡುತ್ತಿದ್ದಾರೆ. ಆದರೆ, ಮೀಟರ್ ಅಳವಡಿಸದ ಭಾಗದಲ್ಲಿ ಅವರು ಎಷ್ಟೇ ನೀರು ಬಳಸಿದರೂ ಅವರಿಗೆ ನಿಗದಿತ ಕರ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಪುರಸಭೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ತಾರತಮ್ಯ ಮಾಡುತ್ತಿದೆ ಎಂದು ವೇದಿಕೆ ದೂರಿದೆ. ಪುರಸಭೆ ಪಟ್ಟಣದಲ್ಲಿ ಪೂರ್ಣ ಭಾಗವಾಗಿ ನಳದ ಮೀಟರ್ ಜೋಡಣೆ ಆಗುವವರೆಗೂ ಎಲ್ಲರಿಗೂ ಒಂದೇ ದರದಂತೆ ನೀರಿನ ಕರ ವಸೂಲಿ ಮಾಡಬೇಕು. ಪುರಸಭೆ ಆಸ್ತಿ ತೆರಿಗೆಯನ್ನು ಶೇ. 30 ಹೆಚ್ಚಳ ಮಾಡಿದ್ದು, ಇದರಿಂದ ಬಡ ನೇಕಾರರ ಊರಿಗೆ ಹೊರೆಯಾಗಿದೆ. ಮೇಲಧಿ ಕಾರಿಗಳು ಇದನ್ನು ಪುನರ್ ಪರಿಶೀಲಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹಿರಿಯ ನಾಗರಿಕ ಪ್ರಜಾಜಾಗೃತ ವೇದಿಕೆ ಅಧ್ಯಕ್ಷ ಯಂಕಣ್ಣ ಮ್ಯಾಗಿನಹಳ್ಳಿ, ನಾಗಪ್ಪ ಸಿದ್ದಮಲ್ಲ, ಗೌರೀಶಪ್ಪ ಭಾವಿ, ಶಿವರುದ್ರಪ್ಪ ಹೆಗಡೆ, ಶಿವಪುತ್ರಪ್ಪ ಹಟ್ಟಿ ಎಚ್ಚರಿಸಿದ್ದಾರೆ