ಸುಗಮ ಸಂಚಾರಕ್ಕೆ ನಿತ್ಯ ಸರ್ಕಸ್
Team Udayavani, Jan 4, 2020, 3:07 PM IST
ಇಳಕಲ್ಲ: ನಗರದ ಎಸ್.ಆರ್. ಕಂಠಿ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ಹೋಗುವ ನಗರದ ಪ್ರಮುಖ ರಸ್ತೆಯ ಮೇಲಿನ ಟಾರ್ ಕಿತ್ತು ಸಂಪೂರ್ಣ ಹದಗೆಟ್ಟು ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ.
ನಗರಕ್ಕೆ ಬರುವ ಪ್ರತಿಯೊಂದು ವಾಹನಕ್ಕೂ ಸ್ವಾಗತ ಕೋರುವ ಹಾಗೂ ಬೀಳ್ಕೊಡುವ ಪ್ರಮುಖ ರಸ್ತೆಯಾಗಿದ್ದು, ಪ್ರತಿದಿನ ನೂರಾರು ಸರಕಾರಿ ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಇಂತಹ ನಗರದ ಪ್ರಮುಖ ರಸ್ತೆ ಇಂದು ದೊಡ್ಡದೊಡ್ಡ ಗುಂಡಿಗಳು, ಅಲ್ಲಲ್ಲಿ ಕಿತ್ತುಹೋದ ಟಾರ್ ರಸ್ತೆಯಲ್ಲಿ ವಾಹನ ನಡೆಸುವುದೇ ಒಂದು ಸಾಹಸವಾಗಿದೆ. ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸುಮಾರು 13 ಶಾಲಾ ಕಾಲೇಜುಗಳು, 8 ಸುಸಜ್ಜಿತ ಆಸ್ಪತ್ರೆಗಳು, ಬ್ಯಾಂಕ್ಗಳು, ನೂರಾರು ವಾಣಿಜ್ಯ ಮಳಿಗೆಗಳು ಇರುವಂತ ಅತ್ಯಂತ ಜನದಟ್ಟನೆಯುಳ್ಳ ಈ ಪ್ರಮುಖ ರಸ್ತೆಯಲ್ಲಿ ಪ್ರತಿದಿನ ಜೀವ ಭಯದಿಂದ ಸಂಚರಿಸುವಂತಾಗಿದೆ.
ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ಜಗಳಗಳು ಜರುಗುತ್ತಲೇ ಇವೆ. ಇದರೊಂದಿಗೆ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದಾಗಿದೆ. ರಸ್ತೆ ಪಕ್ಕದಲ್ಲಿ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿರುವುದರಿಂದ ದೊಡ್ಡ ದೊಡ್ಡ ವಾಹನಗಳ ಸಂಚಾಕ್ಕೆ ಮತ್ತು ಪಾದಚಾರಿಗಳಿಗೆ ಸಂಚರಿಸಲು ಪರದಾಡುವಂತಾಗಿದೆ. ಇಷ್ಟಾದರೂ ನಗರಸಭೆ ಇದರ ಬಗ್ಗೆ ಸ್ವಲ್ಪ ಯೋಚಿಸದೇ ತನಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ ಎಂದು ನಾಗರಿಕರು ದೂರಿದ್ದಾರೆ.
ಕೂಡಲೇ ನಗರಸಭೆ ಅಧಿಕಾರಿಗಳು ಹದಗೆಟ್ಟ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗುವಂತೆ ಕಾಮಗಾರಿ ಕೆಲಸ ಕೈಗೊಳ್ಳಬೇಕು. ವಾಹನಗಳಿಗೆ ವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಬೀದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿಸಂಚಾರಕ್ಕೆ ತೊಂದರೆ ಆಗದಂತೆ ವ್ಯಾಪಾರ ವಹಿವಾಟು ಮಾಡುವಂತಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.