ಬುದ್ಧಿಮಾಂದ್ಯರಿಗೆ ಶೇ. 1 ಮೀಸಲಾತಿ: ಗೆಹ್ಲೋಟ್
Team Udayavani, Nov 12, 2017, 11:38 AM IST
ಬೆಂಗಳೂರು: ಕೇಂದ್ರ ಸರ್ಕಾರಿ ನೌಕರಿಯಲ್ಲಿ ವಿಶೇಷ ಚೇತನರಿಗೆ ಇರುವ ಶೇ.4 ಮೀಸಲಾತಿಯ ಪೈಕಿ
ಶೇ.1ರಷ್ಟನ್ನು ಬುದ್ಧಿಮಾಂದ್ಯರಿಗೆ ಕಾಯ್ದಿರಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ತಾವರ್ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಬುದ್ಧಿಮಾಂದ್ಯ ಮಕ್ಕಳ ಪೋಷಕರ ಸಂಘ ಹಾಗೂ ಪರಿವಾರ ಸಂಸ್ಥೆಯ 25ನೇ ವಾರ್ಷಿಕ ಮಹಾಸಭೆ
ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು. ಸರ್ಕಾರಿ ಉದ್ಯೋಗದಲ್ಲಿ ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ.4ಕ್ಕೆ ಏರಿಸಲಾಗಿದೆ. ಇದರಲ್ಲಿ ಮೀಸಲಾತಿ ಪ್ರಮಾಣವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಶೇ.1ರಷ್ಟು ಬುದಿಟಛಿಮಾಂದ್ಯರಿಗೆ ಮೀಸಲಿಡಲಾಗಿದೆ ಎಂದು ಹೇಳಿದರು.
ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ವಿದ್ಯಾರ್ಹತೆ ಹಾಗೂ ಹುದ್ದೆ ಬಯಸುವ ಕೌಶಲ್ಯ ಹೊಂದಿದ ಬುದ್ಧಿಮಾಂದ್ಯ ಅಭ್ಯರ್ಥಿಗಳು ಮೀಸಲಾತಿ ಸದುಪಯೋಗ ಪಡೆಯಬೇಕು ಎಂದರು.
ವಿದ್ಯಾರ್ಥಿ ವೇತನ: ಕೇಂದ್ರ ಸರ್ಕಾರ ವಿಶೇಷ ಚೇತನರಿಗೆ ಜಾರಿಗೊಳಿಸಿರುವ ಯೋಜನೆಗಳಲ್ಲಿ ಕಳೆದ ಮೂರು
ವರ್ಷಗಳಲ್ಲಿ ದೇಶದ 8 ಲಕ್ಷ ವಿಶೇಷ ಚೇತನರ ಕಲ್ಯಾಣಕ್ಕೆ 500 ಕೋಟಿ ರೂ. ವ್ಯಯಿಸಲಾಗಿದೆ. ಜೊತೆಗೆ ಐಐಟಿ,
ಐಐಎಂ ಸೇರಿ ವಿವಿಧ ಸಂಸ್ಥೆಗಳು ಹಾಗೂ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವ ವಿಶೇಷ ಚೇತನರಿಗೆ ವಿದ್ಯಾರ್ಥಿ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ಚೇತನರಿಗೆ ಗುರುತಿಗಾಗಿ ಅನುಷ್ಠಾನಗೊಳಿಸಿರುವ “ಯುನಿವರ್ಸಲ್ ಐಡೆಂಟಿಫಿಕೇಶನ್ ಕಾರ್ಡ್’ ಯೋಜನೆ
ಮಹಾರಾಷ್ಟ್ರ , ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಿಗೂ
ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕುಟುಂಬದವರಿಗೂ ಕೊಡಿ: ಪುದುಚೇರಿ ಲೆಫಿನೆಂಟ್ ಗವರ್ನರ್ ಕಿರಣ್ ಬೇಡಿ ಮಾತನಾಡಿ, ಬುದ್ಧಿಮಾಂದ್ಯ
ಮಕ್ಕಳ ಆರೈಕೆ, ಅವರ ಜವಾಬ್ದಾರಿ ಸವಾಲಿನಿಂದ ಕೂಡಿರುತ್ತದೆ. ಹೀಗಾಗಿ ಬುದ್ಧಿಮಾಂದ್ಯ ಮಕ್ಕಳನ್ನು ಆರೈಕೆ
ಮಾಡುವ ಕುಟುಂಬದವರಿಗೂ ಕೇಂದ್ರ ಸರ್ಕಾರ ಶೇ.1 ಮೀಸಲಾತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ಸಚಿವ
ಗೆಹ್ಲೋಟ್ರಿಗೆ ಮನವಿ ಮಾಡಿದರು.