ಖೇಣಿ ಕಾಂಗ್ರೆಸ್ ಗೆ: ಹೋರಾಟದ ಅಸ್ತ್ರವಾಗಿ ಬಳಸಲು ಬಿಜೆಪಿ ನಿರ್ಧಾರ
Team Udayavani, Mar 6, 2018, 9:30 AM IST
ಬೆಂಗಳೂರು: ನೈಸ್ ಮುಖ್ಯಸ್ಥ, ಕನ್ನಡ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರುವ ಕ್ರಮ ಕರ್ನಾಟಕ ವಿರೋಧಿ ಎಂದು ಟೀಕಿಸಿರುವ ಬಿಜೆಪಿ, ಈ ಪ್ರಕರಣ ವನ್ನು ಕಾಂಗ್ರೆಸ್ ಸರಕಾರದ ವಿರುದ್ಧದ ತನ್ನ ಹೋರಾಟದ ಅಸ್ತ್ರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.
ನೈಸ್ ಹಗರಣದ ಮೂಲಕ ಸಹಸ್ರಾರು ಮಂದಿಯನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿರುವ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್ ಕರ್ನಾಟಕ ವಿರೋಧಿ ಮತ್ತು ರಾಜ್ಯದ ಜನರ ವಿರೋಧಿ ನೀತಿ ಅನುಸರಿಸಿದೆ. ಆ ಮೂಲಕ ತನ್ನ ನಿಜ ಬಣ್ಣ ಮತ್ತು ನಿಜ ಸ್ವರೂಪವನ್ನು ಜನರ ಮುಂದೆ ಬಿಚ್ಚಿಟ್ಟಿದೆ. ಹೀಗಾಗಿ ಬಿಜೆಪಿ ನಡೆಸುತ್ತಿರುವ ಕಾಂಗ್ರೆಸ್ ಸರಕಾರದಿಂದ ಬೆಂಗಳೂರು ರಕ್ಷಿಸಿ ಹೋರಾಟ ದೊಂದಿಗೆ ಅಶೋಕ್ ಖೇಣಿಯನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿರುವ ಒಟ್ಟು ನಡವಳಿಕೆಯಿಂದ ಬೆಂಗಳೂರನ್ನು ಕಾಪಾಡಿ ಎಂಬ ಹೋರಾಟವನ್ನೂ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ಮತ್ತು ಶಾಸಕ ಎಸ್.ಸುರೇಶ್ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ತಾವು ಹೊಸ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಗೆ ತಂದವರ ರೀತಿ ವರ್ತಿಸುತ್ತಿದ್ದಾರೆ. ಯಾರ್ಯಾರು ವಿರೋಧ ಪಕ್ಷದಲ್ಲಿದ್ದಾಗ ಜೈಲು ಹಕ್ಕಿಗಳು ಎಂದು ಟೀಕೆ ಮಾಡುತ್ತಿದ್ದರೋ ಅಂಥವರು ತಮ್ಮ ಪಕ್ಷಕ್ಕೆ ಸೇರಿದ ತಕ್ಷಣ ಬಹಳ ಒಳ್ಳೆಯ ರಾಜಕಾರಣಿಗಳು, ಒಳ್ಳೆಯ ರಾಜಕೀಯ ನಾಯಕರಾಗಿಬಿಡುತ್ತಾರೆ. ಅದೇ ಸಾಲಿಗೆ ಸೇರಿದ ಇನ್ನೊಬ್ಬರು ಮಹಾಪುರುಷನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ ಅಶೋಕ್ ಖೇಣಿಯಂಥವರನ್ನು ಸೇರಿಸಿಕೊಳ್ಳುವ ಕಾಂಗ್ರೆಸ್ ಪಕ್ಷ ಎಂಬ ಡಿಟರ್ಜೆಂಟ್ ಕರ್ನಾಟಕಕ್ಕೆ ಮಾರಕ ಎಂಬುದು ಜನತೆಗೆ ಗೊತ್ತಾಗಿದೆ ಎಂದರು.