ಪ್ರತ್ಯೇಕತಾವಾದಿಗಳಿಗೆ ಕುಮಾರ ಸವಾಲು
Team Udayavani, Jul 27, 2018, 6:05 AM IST
ಬೆಂಗಳೂರು: ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟುಕೊಂಡು ಉತ್ತರ ಕರ್ನಾಟಕ ಬಂದ್ಗೆ ಕರೆ ಕೊಟ್ಟಿರುವ ಸಂಘಟನೆಯವರು
ಸುವರ್ಣಸೌಧಕ್ಕೆ ಬಂದು ಚರ್ಚೆ ಮಾಡಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಬೇಡಿಕೆ ಎರಡು ತಿಂಗಳಿಂದ ಆರಂಭವಾಗಿದೆಯೇ? ಈ ರೀತಿಯ ಬೇಡಿಕೆಯ ಬದಲು ಅಭಿವೃದ್ಧಿ ಎಷ್ಟಾಗಿದೆ ಎಂಬುದನ್ನು ಚರ್ಚಿಸಲಿ. ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧವಾಗಿದ್ದೇವೆ. ಆ ಸಂಘಟನೆಯನ್ನು ಚರ್ಚೆಗೆ ಆಹ್ವಾನಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೈತರ ಸಾಲಮನ್ನಾ ಮಾಡಿದಕ್ಕೆ ನನ್ನನ್ನು ಶ್ಲಾ ಸಬೇಕು. ಬಿಜೆಪಿಯವರು ನಾಲ್ಕು ವರ್ಷಗಳ ಕಾಲ ಏನೂ ಮಾಡಿಲ್ಲ. ಇದು ರಾಜಕೀಯ ದುರುದ್ದೇಶದ ಪಾದಯಾತ್ರೆ ಎಂದು ಲೇವಡಿ ಮಾಡಿದರು.
ಪ್ರತ್ಯೇಕ ಕೂಗು ಬೇಡ:
ಪರಮೇಶ್ವರ್
ಈ ಮಧ್ಯೆ, ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಒತ್ತಾಯಿಸಿ ಬಂದ್ ಕರೆ ಕೊಟ್ಟವರಿಗೆ ಬಂದ್ ಮಾಡದಂತೆ ಮನವಿ ಮಾಡುತ್ತೇನೆ. ನಾವೇನೂ ಕೇವಲ ಮಧ್ಯ ಕರ್ನಾಟಕದವರ ಸಾಲ ಮಾತ್ರ ಮನ್ನಾ ಮಾಡಿಲ್ಲ. ಯಾವ ಅರ್ಥದಲ್ಲಿ ಮುಖ್ಯಮಂತ್ರಿಯವರು ಉತ್ತರ ಕರ್ನಾಟಕದವರು ಓಟು ಹಾಕಿಲ್ಲ ಎಂದು ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಕರ್ನಾಟಕವನ್ನು ಒಡೆಯುವ ಉದ್ದೇಶದ ಬಂದ್ ಕೈ ಬಿಡಬೇಕು. ಕರ್ನಾಟಕ ಒಂದೇ.
ಅದರಲ್ಲಿ ಸೆಕೆಂಡ್ ಕರ್ನಾಟಕ ಅನ್ನೋದಿಲ್ಲ. ಅಖಂಡ ಕರ್ನಾಟಕವೇ ನಮ್ಮದು ಎಂದು ಹೇಳಿದರು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 124 ತಾಲೂಕುಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೇವೆ. ರಾಜ್ಯ ಸರ್ಕಾರದ ಹೋರಾಟದ ಫಲವಾಗಿಯೇ ಹೈದರಾಬಾದ್ ಕರ್ನಾಟಕ ಭಾಗ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಸಿಕ್ಕಿದೆ. ನಮಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಬೇಡ ಎಂಬ ಉದ್ದೇಶವಿದ್ದಿದ್ದರೆ ನೀರಾವರಿ ಯೋಜನೆಗಳನ್ನು ನೀಡುತ್ತಿರಲಿಲ್ಲ ಎಂದು ಹೇಳಿದರು.