ಸರ್ಕಾರವನ್ನು ಟೀಕಿಸಿದ ರೇಣುಗೆ ತರಾಟೆ
Team Udayavani, Jul 8, 2018, 7:00 AM IST
ವಿಧಾನಸಭೆ: ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದು ಆರೋಪಿಸಿದ್ದಲ್ಲದೆ, ಈ ಸರ್ಕಾರ
ಉರುಳಿ ಬಿಜೆಪಿ ಸರ್ಕಾರ ಬಂದೇ ಬರುತ್ತದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ ಬಿಜೆಪಿ ಸದಸ್ಯ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಆಡಳಿತ ಪಕ್ಷಗಳ ಸದಸ್ಯರು ತಿರುಗಿಬಿದ್ದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ರಾಜ್ಯಾಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ರೇಣುಕಾಚಾರ್ಯ, ಆರಂಭದಿಂದಲೇ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದರಲ್ಲದೆ, ಧರ್ಮ ಒಡೆದವರೊಂದಿಗೆ ಮಾಡಿಕೊಂಡ ಮೈತ್ರಿಯನ್ನು ಪವಿತ್ರ ಎನ್ನಲು ಹೇಗೆ ಸಾಧ್ಯ ಎಂದು ಜೆಡಿಎಸ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಹಿಂದೆ ಡಿ.ಕೆ.ರವಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು
ಒತ್ತಾಯಿಸಿದ್ದ ಕುಮಾರಸ್ವಾಮಿ ಅವರು ಈಗ ಜಾರ್ಜ್ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ತಲೆ ಕತ್ತರಿಸಿಕೊಳ್ಳುವುದಾಗಿ ಹೇಳಿದ್ದ ಜಮೀರ್ ಅಹಮದ್
ಮಂತ್ರಿಯಾಗಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರನ್ನು
ಕೆರಳಿಸಿತು.ರೇಣುಕಾಚಾರ್ಯ ವಿರುದ್ಧ ಎರಡೂ ಪಕ್ಷಗಳ ಸದಸ್ಯರು ಒಟ್ಟಾಗಿ ಮುಗಿಬಿದ್ದಿದ್ದರಿಂದ ಸದನದಲ್ಲಿ ಗದ್ದಲ
ಸೃಷ್ಟಿಯಾಯಿತು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನೀವು ವಿಷಯ
ಬಿಟ್ಟು ಎಲ್ಲೆಲ್ಲೋ ಹೋಗುತ್ತಿದ್ದೀರಿ. ಮೊದಲು ವಿಷಯಕ್ಕೆ ಬನ್ನಿ ಎಂದು ರೇಣುಕಾಚಾರ್ಯಗೆ ಸೂಚಿಸಿದರು.