ಕೊಡಗಿನಲ್ಲಿ ಭೂಕಂಪ ಸಾಧ್ಯತೆ ವದಂತಿ
Team Udayavani, Aug 19, 2018, 7:00 AM IST
ಬೆಂಗಳೂರು: ಐದು ದಶಕಗಳ ದಾಖಲೆ ಮಳೆಯಿಂದಾಗಿ ಕೊಡಗಿನ ಬಹುಪಾಲು ಜನ ತತ್ತರಿಸಿದ್ದರೆ ಭೂಕಂಪ ಸಂಭವಿಸಲಿದೆ ಎಂಬ ವದಂತಿ ಅವರನ್ನು ಇನ್ನಷ್ಟು ಕಂಗೆಡಿಸಿತ್ತು.
ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಭೂ ಕುಸಿತ ಮುಂದುವರಿದಿದ್ದು, ರಸ್ತೆ, ಗುಡ್ಡಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭೂಕಂಪ ಸಂಭವಿಸಲಿದೆ ಎಂಬ ವದಂತಿ ಕೇಳಿಬಂತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ, ಸಂದೇಶ ವಿನಿಮಯವಾಗಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಲಾರಂಭಿಸಿತು.
ತಕ್ಷಣವೇ ಕೊಡಗು ಜಿಲ್ಲಾಧಿಕಾರಿಗಳು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸೇರಿದಂತೆ ಇತರೆ ಇಲಾಖೆಗಳನ್ನು ಸಂಪರ್ಕಿಸಿ ಭೂಕಂಪ ಸಂಭವಿಸಲಿದೆ ಎಂಬುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಟ್ವೀಟ್ ಮೂಲಕ ಭೂಕಂಪ ಸಾಧ್ಯತೆ ಇಲ್ಲ ಎಂಬುದನ್ನು ಪುನರುಚ್ಚರಿಸಿದರು. “ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗಲಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂವಿಜ್ಞಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಆದ್ದರಿಂದ ಇಂತಹ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ಕೊಡಗು ಜಿಲ್ಲಾಧಿಕಾರಿ ವಿನಂತಿಸಿಕೊಂಡಿದ್ದಾರೆ’ ಎಂಬುದಾಗಿ ಕುಮಾರಸ್ವಾಮಿ ಟ್ವೀಟ್ ಮಾಡಿದರು. ಬಳಿಕ ವದಂತಿಗೆ ತೆರೆಬಿತ್ತು.