ತಾ.ಆಸ್ಪತ್ರೆ ಮೇಲ್ದರ್ಜೆಗೆ ಸಿಗದ ಅನುಮೋದನೆ
ಶಾಸಕರ ಮನವಿಗೆ ಸ್ಪಂದಿಸದ ರಾಜ್ಯ ಸರ್ಕಾರ , ಸಚಿವ ಸಂಪುಟ ನಿರ್ಣಯ ಮುಂದೂಡಿಕೆ
Team Udayavani, Oct 31, 2020, 2:08 PM IST
ದೊಡ್ಡಬಳ್ಳಾಪುರ: ತಾಲೂಕಿನ ತಾಯಿ ಮತ್ತು ಮಗು ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಿಗಬೇಕಾದ ಆಡಳಿತಾತ್ಮಕ ಅನುಮೋದನೆ ಸಿಗದೇ ಸಂಪುಟ ನಿರ್ಣಯವನ್ನು ಮುಂದೂಡ ಲಾಗಿರುವುದು ತಾಲೂಕಿನ ಜನರಿಗೆ ನಿರಾಸೆ ಮೂಡಿಸಿದೆ.
3.5 ಲಕ್ಷ ಜನಸಂಖ್ಯೆ ಇರುವ ತಾಲೂಕಿನಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮೊದಲು ನಗರದ ಹಳೆ ಬಸ್ ನಿಲ್ದಾಣದ ಬಳಿ ಕ್ಯಾರ್ಯ ನಿರ್ವಹಿಸುತ್ತಿತ್ತು. ಇದೀಗ ಆಸ್ಪತ್ರೆ ಪ್ರವಾಸಿ ಮಂದಿರದ ಬಳಿ ಇರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆಸ್ಪತ್ರೆಗೆ ನಿತ್ಯ 1,500 ಕ್ಕೂ ಹೆಚ್ಚು ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಇದರೊಂದಿಗೆ ಹೆರಿಗೆ ವಾರ್ಡ್, ಇತರೆ ತುರ್ತು ಚಿಕಿತ್ಸೆಗಳಿಗಾಗಿ ನಿತ್ಯ ನೂರಾರು ರೋಗಿಗಳು ದಾಖಲಾಗುತ್ತಿದ್ದಾರೆ.
ಆದರೆ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಆಸ್ಪತ್ರೆಯ ಸ್ಥಿತಿಗತಿಗಳ ಸುಧಾರಣೆಗಾಗಿ ಯೋಜನೆ ರೂಪುಗೊಂಡಿತ್ತು.
ಕೋವಿಡ್-19 ಒತ್ತಡ: ಕೋವಿಡ್ ಸೋಂಕಿ ನಂತಹ ಕಷ್ಟದ ಸಂದರ್ಭದಲ್ಲಿ ತಾಲೂಕಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದ್ದರೆ, ಜನತೆಗೆ ಮತ್ತಷ್ಟು ಸೌಲಭ್ಯ ದೊರಕುತ್ತಿತ್ತು. ಕೇವಲ 2 ಮಾತ್ರ ಆಕ್ಸಿಜನ್ ಸೌಲಭ್ಯ ಇರುವುದರಿಂದ ಕೋವಿಡ್ ಸೋಂಕಿತರನ್ನು ಇತರ ತಾಲೂಕಿಗೆ ಅಥವಾ ಖಾಸಗಿ ಆಸ್ಪತ್ರೆಗೆ ಕಳಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಕ್ಸಿಜನ್ ಕೊರತೆ ಯಿಂದಾಗಿ ಸಾವು ನೋವುಗಳು ಉಂಟಾ ಗುತ್ತಿರುವುದರಿಂದ ಜನರ ಆತಂಕ ಹೆಚ್ಚಿಸಿದೆ.ಸಿಗದ ಆಡಳಿತಾತ್ಮಕ ಅನುಮೋದನೆ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾದ ಆಸ್ಪತ್ರೆ ತಾಲೂಕಿನ ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಗರದಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ 250 ಹಾಸಿಗೆ ಆಸ್ಪತ್ರೆ ಮಾಡಲು 10 ಕೋಟಿ ರೂ. ಬಜೆಟ್ನಲ್ಲಿ ಮೀಸಲಿಡಲಾಗಿತ್ತು. ಆದರೆ ಜಿಲ್ಲಾಸ್ಪತ್ರೆಗೆ ಪೂರಕವಾದ ಸೌಲಭ್ಯಗಳು ಸಿಗದೇ ವಿಳಂಬವಾಗುತ್ತಿವೆ.
ದೊಡ್ಡಬಳ್ಳಾಪುರ ತಾಲೂಕಿನ 250 ಹಾಸಿಗೆ ಗಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆ ಯನ್ನಾಗಿ ಒಟ್ಟು 89.10 ಕೋಟಿ ರೂ. ಅಂದಾಜು ಮೊತ್ತದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡದೆ, ಸಚಿವ ಸಂಪುಟ ನಿರ್ಣಯವನ್ನು ಮುಂದೂಡಲಾಗಿದೆ. ಈ ಕುರಿತಂತೆ ಶಾಸಕ ಟಿ.ವೆಂಕಟರಮಣಯ್ಯ ಪದೇ ಪದೇ ಸದನದಲ್ಲಿ ಮನವಿ ಮಾಡಿದರೂ, ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ.
ಮಲತಾಯಿ ಧೋರಣೆ : ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ ಯನ್ನು ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಪದೇ ಪದೇ ಮನವಿಮಾಡಿದರು ರಾಜ್ಯ ಸರ್ಕಾರ ಸ್ಪಂದಿಸದೆ ಮಲತಾಯಿ ಧೋರಣೆ ಮಾಡುತ್ತಿದೆ. ಈ ಹಿಂದೆ ಪೂರ್ತಿ ಪ್ರಮಾಣದ ಸಂಪುಟ ವಿಸ್ತರಣೆ ನಂತರ ಅನುಮೋದನೆ ನೀಡಲಾಗುವುದು ಎಂದು ಉತ್ತರ ನೀಡಲಾಗಿತ್ತು. ಆದರೆ ಈ ವೇಳೆ ಯಾವುದೇ ಉತ್ತರ ನೀಡದೆ, ಸಚಿವ ಸಂಪುಟ ನಿರ್ಣಯ ಮುಂದೂಡುವ ಮೂಲಕ ಕೋವಿಡ್ ಕಷ್ಟದ ಸಂದರ್ಭದಲ್ಲಿ ಜನರಿಗೆ ಬಹು ಅಗತ್ಯವಾಗಿದ್ದ ಸೌಲಭ್ಯದಿಂದ ವಂಚಿತರನ್ನಾಗಿಸುತ್ತಿದೆ ಎನ್ನುತ್ತಾರೆ ಶಾಸಕ ಟಿ.ವೆಂಕಟರಮಣಯ್ಯ