Belagavi: ಬೃಹತ್ ಸಾರಾಯಿ ಅಡ್ಡೆಗೆ 100ಕ್ಕೂ ಹೆಚ್ಚು ಪೊಲೀಸರಿಂದ ದಾಳಿ
Team Udayavani, Feb 25, 2024, 12:58 AM IST
ಬೆಳಗಾವಿ: ಇಲ್ಲಿಗೆ ಸಮೀಪದ ಸೋನಟ್ಟಿಯ ಗುಡ್ಡಗಾಡು ಪ್ರದೇಶದ ಕಳ್ಳಭಟ್ಟಿ ತಯಾರಿ ಅಡ್ಡೆಗೆ ಶನಿವಾರ 100ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ, ಸುಮಾರು 12 ಲಕ್ಷ ರೂ. ಮೌಲ್ಯದ 5 ಸಾವಿರ ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.
200 ಲೀಟರ್ ಬೆಲ್ಲದ ಕೊಳೆ ಇರುವ 26 ಬ್ಯಾರೆಲ್, 30 ಲೀಟರ್ ಬೆಲ್ಲದ ಕೊಳೆ ಕಳ್ಳಭಟ್ಟಿಯ 17 ಬ್ಯಾರೆಲ್ಗಳಲ್ಲಿದ್ದ ಒಟ್ಟು 5,700 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆಯಲಾಗಿದೆ. ದಂಧೆಕೋರರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈ ಬಗ್ಗೆ ಸೋನಟ್ಟಿಯ ಸಿದ್ರಾಯಿ ರಾಜಕಟ್ಟಿ, ಶೆಟ್ಟೆವ್ವ ರಾಜಕಟ್ಟಿ, ಸಿದ್ದಪ್ಪ ಪಣಗುದ್ದಿ, ಬಾಳಪ್ಪ ಮುಚ್ಚಂಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ದರಾಮಪ್ಪ, ಡಿಸಿಪಿ ರೋಹನ್ ಜಗದೀಶ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಭಾಗವಹಿಸಿದ್ದ ಸಿಬಂದಿಗೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.
2011ರಲ್ಲಿ ಇದೇ ಗ್ರಾಮದ ಹೊರವಲಯದಲ್ಲಿರುವ ಕಾರಾವಿ ಗುಡ್ಡದ ಕಳ್ಳಭಟ್ಟಿ ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದ ಆಗಿನ ಅಬಕಾರಿ ಸಚಿವ ರೇಣುಕಾಚಾರ್ಯ ಸಹಿತ ಪೊಲೀಸರ ಮೇಲೆ ದಂಧೆಕೋರರು ಕಲ್ಲು ತೂರಾಟ ನಡೆಸಿದ್ದರು. ಇವರಿಂದ ತಪ್ಪಿಸಿಕೊಳ್ಳಲು ಸಚಿವರು ಸೇರಿ ಎಲ್ಲರೂ ಹರಸಾಹಸ ಪಟ್ಟಿದ್ದರು.