ಎಪಿಎಂಸಿ ಕಾಯ್ದೆ ತಿದ್ದುಪಡಿ ಬೇಡ
Team Udayavani, Jun 3, 2020, 4:39 PM IST
ಸಾಂದರ್ಭಿಕ ಚಿತ್ರ
ಸಂಡೂರು: ರೈತರಿಗೆ ಮಾರಕವಾದ ಎಪಿಎಂಸಿ ನೂತನ ಕಾಯಿದೆಯನ್ನು ತಕ್ಷಣ ರದ್ದು ಪಡಿಸಬೇಕು. ಈ ಹಿಂದೆ ಇದ್ದ ನಿಯಮವನ್ನೇ ಪಾಲಿಸಬೇಕು ಎಂದು ತಾಲೂಕು ರೈತಸಂಘದ ಹಸಿರು ಸೇನೆ ಅಧ್ಯಕ್ಷ ಧರ್ಮನಾಯ್ಕ ಒತ್ತಾಯಿಸಿದರು.
ಅವರು ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಸರ್ಕಾರ ರೈತರಿಗೆ ನಷ್ಟವಾಗುವಂಥ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ತರುವ ಮೂಲಕ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕಾರ್ಯ ಮಾಡುತ್ತಿದೆ. ನೂತನ ಕಾಯಿದೆಯಿಂದ ರೈತರಿಗೆ ಸಿಗುವ ಲಾಭಕ್ಕಿಂತ ಮಾರಾಟಗಾರರಿಗೆ ಹೆಚ್ಚು ಲಾಭವಾಗುವಂಥ ಈ ನಿಯಮ ಸರಿಯಾದುದಲ್ಲ. ಆದ್ದರಿಂದ ತಕ್ಷಣ ಹಿಂಪಡೆಯಬೇಕು. ಎಂದರು.
ಈ ಸಂದರ್ಭದಲ್ಲಿ ಮುಖಂಡ ಶ್ರೀಪಾದ ಸ್ವಾಮಿ ಮಾತನಾಡಿ, ರೈತರ ಖಾತೆಗೆ 5000 ಹಾಕುತ್ತೇವೆ ಎಂದು ಘೋಷಣೆ ಮಾಡಿದ ಮೋದಿಯವರು ಇನ್ನೂ ಸಹ ಅವರ ಖಾತೆಗೆ ಹಣ ಬಿದ್ದಿಲ್ಲ. ತಕ್ಷಣ ಅವರ ಖಾತೆಗೆ ಹಣ ಹಾಕುವ ಮೂಲಕ ರೈತರನ್ನು ಸಂಕಷ್ಟದಿಂದ ಕಾಪಾಡಬೇಕು. ಒಂದು ಕಡೆ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯೂ ಇಲ್ಲ, ಬೆಲೆಯೂ ಇಲ್ಲವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆದ್ದರಿಂದ ತಕ್ಷಣ ಪರಿಹಾರ ಧನವನ್ನು ಅವರ ಖಾತೆಗಳಿಗೆ ಹಾಕುವ ಮೂಲಕ ರೈತರನ್ನು ರಕ್ಷಿಸಬೇಕು. ರೈತರಿಗೆ ನೂತನವಾಗಿ ತಂದಿರುವ ಎಪಿಎಂಸಿ ಕಾಯ್ದೆಯನ್ನು ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು, ಮುಖಂಡರು ಉಪಸ್ಥಿತರಿದ್ದರು. ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.