ಆರೋಗ್ಯ ಸಹಾಯಕರ ಬೇಡಿಕೆ ಈಡೇರಿಕೆಗೆ ಮನವಿ
Team Udayavani, May 26, 2020, 6:16 AM IST
ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಪ್ರಮುಖ ಪದಾಧಿಕಾರಿಗಳು ಸೋಮವಾರ ಬಳ್ಳಾರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಸಂಕಷ್ಟದಲ್ಲಿ ಆರೋಗ್ಯ ಸಹಾಯಕರು ಎಂಬ ತಲೆ ಬರಹದಲ್ಲಿ ಮೇ 19ರಂದು ಉದಯವಾಣಿಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿಯನ್ನು ಇದೇ ಸಂದರ್ಭ ಸಚಿವರಿಗೆ ತೋರಿಸಿ ಗಮನ ಸೆಳೆದರು. ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಒಕ್ಕೂಟದ ಪದಾಧಿಕಾರಿಯೂ ಆಗಿರುವ ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಆರೋಗ್ಯ ಇಲಾಖೆಯ ಪ್ರತಿನಿಧಿ ಎಂ.ಎಸ್.ಗೌಡರ, ರಾಜ್ಯವ್ಯಾಪಿ ಆರೋಗ್ಯ ಸಹಾಯಕರ ಪದನಾಮ ಬದಲಾವಣೆ, 6ನೇ ವೇತನ ಆಯೋಗದ ತಾರತಮ್ಯ ನಿವಾರಣೆ, ರಿಸ್ಕ್ ಅಲಾವೆನ್ಸ್ ಒದಗಿಸುವಿಕೆ ಸೇರಿ ಕೆಲ ಪ್ರಮುಖ ಬೇಡಿಕೆ ಈಡೇರಿಕೆಗೆ ಸಚಿವರನ್ನು ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸಿರುವ ಸಚಿವರು, ಮೇ 26ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಇದೇ ವಿಷಯ ಹಿನ್ನೆಲೆ ಸಭೆ ಕರೆದಿದ್ದು, ಸಂಘದ ಪದಾಧಿಕಾರಿಗಳನ್ನೂ ಬರಹೇಳಿದ್ದಾರೆ. ನಾವು ಸದ್ಯ ಬೆಂಗಳೂರಿಗೆ ತೆರಳುತ್ತಿದ್ದು, ಮಂಗಳವಾರದ ಸಭೆಯಲ್ಲಿ ಸಕಾರಾತ್ಮಕ ಸ್ಪಂದನೆ ದೊರಕುವ ಆಶಾಭಾವ ಹೊಂದಿದ್ದೇವೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಬಿ.ಎ.ಕುಂಬಾರ, ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಧರ್ಮನಗೌಡ, ಗುರು ಹುಲುಕಲ್, ವಹಾಬ್, ವಿರೂಪಾಕ್ಷ, ಸದಸ್ಯರಾದ ಜಕ್ಕನಗೌಡರ, ವಿನೋದ ಪಗಾದ, ಹೊಸಪೇಟೆ ತಾಲೂಕು ಸದಸ್ಯ ರವಿ ಜಿನಗಾ, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲಾ ಸಂಘಗಳ ಸದಸ್ಯರು ಇದ್ದರು ಎಂದು ತಿಳಿಸಿದ್ದಾರೆ.