ನರೇಗಾ ಕಾಮಗಾರಿ ಕೈಗೊಳ್ಳಲು ರೈತರಿಗೆ ಅವಕಾಶ
Team Udayavani, Oct 6, 2020, 12:44 PM IST
ಯಳಂದೂರು: ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಭೂ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಕೃಷಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅಂಬಳೆ ಗ್ರಾಪಂ ಪಿಡಿಒ ಗಂಗಾಧರ್ ಮನವಿ ಮಾಡಿದರು.
ಗ್ರಾಪಂ ಮುಂಭಾಗ ನಡೆದ ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಕ್ರಿಯಾಯೋಜನೆ ಅಭಿಯಾನದಲ್ಲಿ ಮಾತನಾಡಿದ ಅವರು, ರೈತರ ಕ್ರಿಯಾಯೋಜನೆ ಜಾರಿಯಲಿದ್ದು. ರೈತರಿಗೆ ಇರುವ ಮಾನದಂಡಗಳ ಬಗ್ಗೆ ಕಚೇರಿಯಲ್ಲಿ ಮಾಹಿತಿ ಲಭ್ಯವಿದೆ. ಈ ಕುರಿತು ಅರ್ಜಿ ಪಡೆದು, ಇದಕ್ಕೆ ನಿಗದಿಯಾಗಿರುವ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಕಾಮಗಾರಿಯನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ನರೇಗಾ ತಾಲೂಕು ಸಂಯೋಜಕ ರಾಜ್ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 130 ಕಾಮಗಾರಿಗಳು ನಡೆದಿದ್ದು, ಒಂದುಕೋಟಿರೂ.ಗೂಅಧಿಕ ಹಣವನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು. ರೇಷ್ಮೆ, ಪಶುಸಂಗೋಪನೆ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಅಂಬಳೆ ಗ್ರಾಮದಲ್ಲಿ ನಡೆದಿರುವ ಕೆಲ ನರೇಗಾ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಕೆರೆ ಹಾಗೂ ಕಾಲುವೆ ಕಾಮಗಾರಿಗೆ ಹೆಚ್ಚು ಹಣವನ್ನು ಪಾವತಿಸಲಾಗಿದೆ. ಕೆಲವರಿಗೆ ಇನ್ನೂ ನರೇಗಾದಡಿ ಕೂಲಿ ನೀಡಿಲ್ಲ ಎಂದು ಸ್ಥಳೀಯರು ದೂರು ಸಲ್ಲಿಸಿದರು.
ಕಾಮಗಾರಿ ನಡೆಯದಿರುವ ಬಗ್ಗೆ ಲಿಖೀತ ದೂರು ಸಲ್ಲಿಸುವಂತೆ ಆಡಳಿತಾಧಿಕಾರಿ ಶ್ವೇತಾ ಸಲಹೆ ನೀಡಿದರು.ಸಭೆಯಲ್ಲಿ ತಾಪಂ ಸದಸ್ಯ ವೈ.ಕೆ.ಮೋಳೆ ನಾಗರಾಜು ಪಂಚಾಯಿತಿ ನೋಡಲ್ ಅಧಿಕಾರಿ ದೀಪಾ, ಪಿಡಿಒಗಂಗಾಧರ್, ಕಾರ್ಯದರ್ಶಿ ಪುಟ್ಟರಾಜು, ನಾಗರಾಜು, ಸತ್ಯಪ್ಪ. ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು.