ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಕರ್ತವ್ಯ ಪಾಲಿಸಿ
Team Udayavani, Jan 4, 2020, 3:00 AM IST
ಚಾಮರಾಜನಗರ: ಸಮಾಜದ ಅಭಿವೃದ್ಧಿಯಲ್ಲಿ ವಕೀಲರು ಹಾಗೂ ನ್ಯಾಯಾಧೀಶರ ಪಾತ್ರ ಮಹತ್ವವಾಗಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪಾಲನೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಡಿ.ವಿ. ಪಾಟೀಲ್ ತಿಳಿಸಿದರು.
ನಗರದ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಗ್ರಂಥಾಲಯದಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ವಕೀಲರ ಡೈರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ವಕೀಲರ ಸಂಘ ಉತ್ತಮ ರೀತಿಯಲ್ಲಿ ಸಂಘಟನೆಗೊಂಡಿದೆ. ಸದಾ ಲವಲವಿಕೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಜನ ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮವಹಿಸುತ್ತಿದೆ ಎಂದು ಪ್ರಶಂಸಿಸಿದರು.
ಅಭಿವೃದ್ಧಿ ಪರ ಬರಹ ಮೂಡಲಿ: ಸಮಾಜದಲ್ಲಿ ನಡೆಯುವ ಆಗು-ಹೋಗುಗಳು ಮತ್ತು ಅಭಿವೃದ್ಧಿ ಪರವಾದ ಬರಹಗಳು ಪತ್ರಕರ್ತರಿಂದ ಮೂಡಿಬರಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರದು ಪ್ರಮುಖ ಪಾತ್ರವಾಗಿದೆ. 2020ರ ನೂತನ ವರ್ಷವು ಎಲ್ಲರಿಗೂ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ ಉಂಟುಮಾಡಲಿ ಎಂದು ಶುಭ ಕೋರಿದರು.
ಉತ್ತಮ ವಾತಾವರಣ ನಿರ್ಮಾಣ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ಆರ್. ಚಂದ್ರಮೌಳಿ ಮಾತನಾಡಿ, ಜಿಲ್ಲಾ ವಕೀಲರ ಸಂಘವು ಎಲ್ಲರ ಒಗ್ಗಟ್ಟಿನಿಂದ ಸಂಘಟನೆ ಮಾಡುವ ಜೊತೆಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಿದೆ. ಒಳ್ಳೆಯ ಸಮಾಜಮುಖೀ ಕಾರ್ಯಕ್ರವನ್ನು ಹಮ್ಮಿಕೊಂಡು ಮಾದರಿ ವಕೀಲ ಸಂಘವಾಗಿ ಹೊರಹೊಮ್ಮಿರುವುದು ಶ್ಲಾಘನೀಯ ಎಂದರು.
ಸಂಘಕ್ಕೆ ಹೆಚ್ಚಿನ ಉತ್ತೇಜನ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ನಮ್ಮ ಸಂಘವು ವಕೀಲರ ಹಿತವನ್ನು ಬಯಸಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ಪ್ರತಿವರ್ಷದಂತೆ ವಕೀಲರ ಡೈರಿಯನ್ನು ಬಿಡುಗಡೆ ಮಾಡಲಾಗಿದೆ. ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಘಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಅವರ ಸಲಹೆ ಮತ್ತು ಸಹಕಾರ ವಕೀಲರ ಸಂಘಕ್ಕೆ ಹೆಚ್ಚಿನ ರೀತಿಯಲ್ಲಿ ದೊರೆಯಲಿ. ವಕೀಲರು ಹಾಗೂ ನ್ಯಾಯಾಧೀಶರುಗಳ ಸಂಬಂಧ ಉತ್ತಮವಾಗಿದ್ದಲ್ಲಿ ಕಕ್ಷಿದಾರರಿಗೆ ಉತ್ತಮ ನ್ಯಾಯದಾನ ನೀಡಬಹುದು ಎಂದರು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಮೇಶ್, ಯಳಂದೂರು ಸಿವಿಲ್ ನ್ಯಾಯಾಧೀಶ ಶರತ್ಚಂದ್ರ.ಎನ್ ಮಾತನಾಡಿದರು. ವಕೀಲರಾದ ಕೆ.ಬಿ. ಷಡಕ್ಷರಿ ಸ್ವಾಮಿ ಮತ್ತು ಎ.ಎಸ್ ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವಿ.ಪಾಟೀಲ್ ಅವರು ಕೇಕ್ ಕತ್ತರಿಸಿ ನೂತನ ವರ್ಷಕ್ಕೆ ಶುಭ ಕೋರಿದರು.
ಈ ವೇಳೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ .ಜಿ.ಬಾದಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಕ್ಷಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಶಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮಿತಾ.ಎಸ್.ವಿ, ಸರ್ಕಾರಿ ಅಭಿಯೊಜಕಿ ಲೋಲಾಕ್ಷಿ, ಜಿಲ್ಲಾ ವಕೀಲ ಎಚ್.ಎನ್.ಲೋಕೇಶ್, ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೀಶ್, ವಕೀಲರ ಸಂಘದ ಕಾರ್ಯದರ್ಶಿ ಎಸ್.ಮಂಜು ಹರವೆ, ಉಪಾಧ್ಯಕ್ಷ ಎಂ.ಶಿವರಾಮು, ಜಂಟಿ ಕಾರ್ಯದರ್ಶಿ ಬಿ.ಮಂಜು, ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀಮತಿ ಅಬೂಬ್ಕರ್, ಜಯಶ್ರೀ ಶೆಣೈ, ಮಹೇಶ್, ಸರ್ಕಾರಿ ವಕೀಲ ಎಂ.ಶಿವಲಿಂಗೇಗೌಡ, ಪುಟ್ಟಸ್ವಾಮಿ, ಎಸ್.ಜಿ.ಮಹಲಿಂಗಸ್ವಾಮಿ ಭಾಗವಹಿಸಿದ್ದರು.