ಪ್ರತಿಯೊಬ್ಬರೂ ವಿವೇಕಾನಂದರ ಆದರ್ಶ ಪಾಲಿಸಿ
Team Udayavani, Jan 13, 2020, 3:00 AM IST
ಗುಂಡ್ಲುಪೇಟೆ: ವಿವೇಕಾನಂದರ ಆದರ್ಶ ಹಾಗೂ ಮಾರ್ಗದರ್ಶನವನ್ನು ಪ್ರತಿಯೊಬ್ಬ ಯುವಕರೂ ಪಾಲಿಸಿದಾಗ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಚಿಕ್ಕಾಟಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಂಜುನಾಥ್ ಹೇಳಿದರು.
ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ಶ್ರೀಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿ, ತಾಲೂಕಿನ ಚಿಕ್ಕಾಟಿ ಮತ್ತು ತೊಂಡವಾಡಿ ಗ್ರಾಮದ ಯುವಕರು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಘ ಸ್ಥಾಪನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿವೇಕಾನಂದರ ಆದರ್ಶ ಹಾಗೂ ಮಾರ್ಗದರ್ಶನವನ್ನು ಅನುಸರಿಸುತ್ತಿರುವುದು ಹೆಮ್ಮೆಯ ವಿಚಾರ. ಇದೇ ರೀತಿಯಾಗಿ ಪ್ರತಿಯೊಬ್ಬ ಯುವಕನೂ ಸಹ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಕೊಳ್ಳಬೇಕು ಎಂದು ಹೇಳಿದರು.
ಯುವಕರು ದೇಶದ ಸಂಪತ್ತು: ಬೇಗೂರು ಠಾಣೆಯ ಎಎಸ್ಐ ದೊರೆರಾಜು ಮಾತನಾಡಿ, ಪ್ರತಿಯೊಬ್ಬ ಯುವಕರು ವಾಹನ ಚಾಲನೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಯುವಕರು ದೇಶದ ಸಂಪತ್ತು. ಇದನ್ನು ಅರಿತು ರಸ್ತೆ ಸಂಚಾರ ಹಾಗೂ ಸುರಕ್ಷಿತ ಚಾಲನೆಗೆ ಹೆಚ್ಚು ಒತ್ತನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.
ಯುವಕರಿಂದ ರಕ್ತದಾನ: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸುತ್ತಮುತ್ತಲ ಗ್ರಾಮದ 34 ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು. ಈ ವೇಳೆ ಸಂಘದ ಅಧ್ಯಕ್ಷ ಸುಂದರ ಪ್ರಸಾದ್, ಆರೋಗ್ಯ ಇಲಾಖೆಯ ಪಿ.ಶಿವರಾಮ್, ಮುಕುಂದ್, ಶಿವಕುಮಾರ್, ಮುಖಂಡ ಮಹದೇವು ಹಾಗೂ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.