ಹನೂರಿಗೆ ಕೊಳ್ಳೇಗಾಲ ಅನುದಾನ ಬಳಕೆ
ನೂತನ ತಾಲೂಕಿಗೆ 60 ಲಕ್ಷ ರೂ. ಮಾತ್ರ ಬಿಡುಗಡೆ
Team Udayavani, Oct 10, 2020, 2:39 PM IST
ಹನೂರು: ನೂತನ ತಾಲೂಕು ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ 60 ಲಕ್ಷ ರೂ. ಬಿಡುಗಡೆಯಾಗಿದೆ. ಇದನ್ನು ಹೊರತು ಪಡಿಸಿ,ಅನಿರ್ಬಂಧಿತ ಅನುದಾನದಡಿ ಹನೂರುಸೇರಿದಂತೆ 50 ಹೊಸ ತಾಲೂಕುಗಳ ಪೈಕಿಯಾವ ತಾಲೂಕಿಗೂಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಅವಿಭಜಿತ ಕೊಳ್ಳೇಗಾಲ ತಾಲೂಕಿಗೆ ಬಿಡುಗಡೆಯಾಗಿದ್ದ 1.50 ಕೋಟಿ ರೂ. ಅನುದಾನವನ್ನೇ ಹನೂರು ತಾಲೂಕಿಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಾಪಂ ಇಒ ರಾಜು ತಿಳಿಸಿದರು.
ಪಟ್ಟಣದ ಜಿ.ವಿ.ಗೌಡ ಪ್ರೌಢಶಾಲೆಯಲ್ಲಿ ತಾಪಂ ಅಧ್ಯಕ್ಷೆ ಸವಿತಾ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,ಹನೂರು ತಾಪಂಗೆ ಕಚೇರಿ ತೆರೆಯಲು ಈ ಹಿಂದೆ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣವನ್ನು ಆಯ್ಕೆಮಾಡಲಾಗಿತ್ತು. ಇಲ್ಲಿ ವಾಹನ ನಿಲುಗಡೆ ಸಮಸ್ಯೆ ಮತ್ತು ಹೆಚ್ಚಿನ ಬಾಡಿಗೆ ನಿಗದಿಪಡಿಸಿದ್ದರಿಂದ ಕಚೇರಿ ತೆರೆದಿಲ್ಲ. ಇದೀಗ ಖಾಸಗಿಯವರ ಒಂದು ಸಂಕೀರ್ಣವನ್ನು ಬಾಡಿಗೆಗೆ ಪಡೆಯಲು ಕ್ರಮವಹಿಸಲಾಗಿದ್ದು, ಇದಕ್ಕೆ ಅನುಮೋದನೆ ಕೂಡ ದೊರೆತಿದೆ. ಆದರೆ, ಸಂಕೀರ್ಣದ ಇ-ಸ್ವತ್ತು ವಿತರಣೆಯಲ್ಲಿ ತಡವಾಗಿದ್ದರಿಂದಕಚೇರಿ ತೆರೆಯಲು ಅಡಚಣೆಯಾಗಿದ್ದು, ವಾರದೊಳಗೆ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದರು. ಎಲ್ಲಾ ಇಲಾಖಾ ಅಧಿಕಾರಿಗಳುಫಲಾನುಭವಿಗಳ ಆಯ್ಕೆ ಮತ್ತು ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಶೇ.94ರಷ್ಟುಬಿತ್ತನೆ: ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ, ತಾಲೂಕಿನ 32,665 ಹೆಕ್ಟೇರ್ ಕೃಷಿ ಭೂಮಿ ಪೈಕಿ 31,889 ಹೆಕ್ಟೇರ್ನ ಲ್ಲಿ ಅಂದರೆ ಶೇ.94ರಷ್ಟು ಬಿತ್ತನೆಯಾಗಿದೆ. ಇಲಾಖೆಯಲ್ಲಿ 2.54 ಲಕ್ಷ ರೂ. ಲಭ್ಯತೆಯಿದ್ದು, ಈ ಅನುದಾನದಡಿ ಕೊಳ್ಳೇಗಾಲ-ಹನೂರು ತಾಲೂಕಿಗೆ ಅನುದಾನವಿಭಜನೆಯಾದ ಕೂಡಲೇ ಸವಲತ್ತು ವಿತರಿಸಲಾಗುವುದು ಎಂದರು.
ನೀರಿನ ಅಭಾವ: ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರುವಿಭಾಗದಅಧಿಕಾರಿ ಮಹ ದೇವಮೂರ್ತಿ ಮಾತನಾಡಿ, ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಮೊದಲ ಹಂತದಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ತಾಲೂಕಿನ ಮಾರ್ಟಳ್ಳಿ, ಸಂದನಪಾಳ್ಯ ಭಾಗದಲ್ಲಿ ಗ್ರಾಪಂ ಮೂಲಕ ಟ್ಯಾಂಕರ್ಗಳಲ್ಲಿ ನೀರು ಪೂರೈಸಲಾಗುತ್ತಿದೆ ಎಂದರು.
20ಕ್ಕೆ ದೇಗುಲ ಆರಂಭ: ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ದೇವಾಲಯ ಅ. 20 ರಿಂದ ತೆರೆಯಲಿದ್ದು, ಇಲ್ಲಿಯೂ ನೀರಿನ ಅಭಾವವಿದೆ. ಕೊಳವೆ ಬಾವಿ ಕೊರೆದರೂ ನೀರು ಸಿಕ್ಕಿಲ್ಲ.ಈಭಾಗದ ಸಮಸ್ಯೆಯನ್ನು ಬಗೆಹರಿಸಲು ಕನಿಷ್ಠ 10 ಲಕ್ಷ ರೂ. ಅವಶ್ಯಕತೆಯಿದ್ದು, ಮುಂದಿನ ದಿನದಲ್ಲಿ ಕ್ರಿಯಾಯೋಜನೆ ತಯಾರಿಸುವಾಗ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡುವಲ್ಲಿ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು.
ತಾಪಂ ಸದಸ್ಯ ರಾಜೇಂದ್ರ, ಹೆಚ್ಚಿನ ಅನುದಾನ ಅವಶ್ಯಕತೆಯಿದ್ದಲ್ಲಿ ಜಿಪಂ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು.
ಪಶು ಸಂಗೋಪನಾ ಇಲಾಖೆ ಬಗ್ಗೆ ಸಹಾಯಕ ನಿರ್ದೇಶಕ ಸಿದ್ದರಾಜು ಮಾಹಿತಿ ನೀಡುತ್ತಿದ್ದರು. ಈ ವೇಳೆ ಕೆಲ ಸದಸ್ಯರು, ಸಭೆಗೆ ಹಿರಿಯ ಅಧಿಕಾರಿಯಾದ ವೆಂಕಟರಾಮು ಅವರಿಂದ ಮಾಹಿತಿ ಬೇಕಿತ್ತು. ಆದರೆ, ಅವರು ಗೈರಾಗಿದ್ದಾರೆ ಎಂದು ಕಿಡಿಕಾರಿದರು.
ಸಭೆಗೂ ಮುನ್ನ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಪ್ರಗತಿಯಲ್ಲಿರುವಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಾಪಂಉಪಾಧ್ಯಕ್ಷೆರುಕ್ಮಿಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮತಿ, ಸದಸ್ಯರಾದ ಶಿವಮ್ಮ, ಪಾರ್ವತಿ,ರಾಜೇಂದ್ರ,ನಟರಾಜು,ಶಕುಂತಲಾ, ಅಲಗತಂಬಡಿ, ಸಣ್ಣಕಾಳಶೆಟ್ಟಿ, ಮಣಿನಾಯ್ಕೆ ಮಾಣಿಕ್ಯ, ಬಿಇಒ ಸ್ವಾಮಿ, ಎಇಇ ರಮೇಶ್, ಶಂಕರ್, ಜೆ.ಇ ರಮೇಶ್, ಸಮಾಜ ಕಲ್ಯಾಣ ಇಲಾಖೆ ಮಂಜುಳಾ, ನರೇಗಾ ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ವ್ಯವಸ್ಥಾಪಕ ಶಂಕರ್ ಇತರರಿದ್ದರು.
ಯೂರಿಯಾ ಅಭಾವ ಸೃಷ್ಟಿಸಿದರೆ ಲೈಸೆನ್ಸ್ರದ್ದು : ತಾಲೂಕಿನಲ್ಲಿ ಕೆಲ ಅಂಗಡಿಯವರು ಕೃತಕ ಯೂರಿಯಾ ಅಭಾವ ಸೃಷ್ಟಿಸಿ, ಪ್ರತಿ ಮೂಟೆಗೂ 400 ರೂ. ದರದಲ್ಲಿ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ ಎಂದುತಾಪಂ ಸದಸ್ಯ ನಟರಾಜು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಇಡೀ ರಾಜ್ಯದಲ್ಲಿಯೇ ಯೂರಿಯಾ ಸಮಸ್ಯೆ ಇದೆ. ಮಂಡ್ಯ ಜಿಲ್ಲೆಯಿಂದ ಖರೀದಿಸಿ ವಿತರಿಸಲಾಗುತ್ತಿದೆ. ಅದಾಗ್ಯೂ ಕೃತಕಅಭಾವ ಸೃಷ್ಟಿಸಿದರೆ ಅಂತಹ ಗೊಬ್ಬರ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.