ಅಕ್ರಮ ನೇಮಕಾತಿ ಖಂಡಿಸಿ ಸ್ವಯಂ ಪ್ರೇರಿತ ಬಂದ್
Team Udayavani, Dec 31, 2019, 3:00 AM IST
ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹುದ್ದೆಗಳ ಅಕ್ರಮ ನೇಮಕಾತಿ ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೋಮವಾರ ಕರೆ ನೀಡಿದ್ದ ಸಂತೇಮರಹಳ್ಳಿ, ಕುದೇರು ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ.
ಬಂದ್ ಕರೆಗೆ ಓಗೊಟ್ಟ ಸಂತೆಮರಹಳ್ಳಿ, ಕುದೇರು ಗ್ರಾಮಗಳ ಜನರು ಅಂಗಡಿ ಮುಂಗಟ್ಟುಗಳು, ಬೇಕರಿ, ಹೋಟಲ್ಗಳನ್ನು ಮುಚ್ಚುವ ಮೂಲಕ ಬೆಂಬಲ ಸೂಚಿಸಿದರು. ಸಂತೇಮರಹಳ್ಳಿ ಕೇಂದ್ರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬಸ್ನಿಲ್ದಾಣದಲ್ಲಿ 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿ, ನಂತರ ಸಂತೇಮರಹಳ್ಳಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.
5ನೇ ದಿನಕ್ಕೆ ಕಾಲಿಟ್ಟ ಧರಣಿ: ಚಾಮುಲ್ ಕಚೇರಿ ಮುಂದೆ ನಡೆಸುತ್ತಿರುವ ಧರಣಿ 5ನೇ ದಿನಕ್ಕೆ ಕಾಲಿಟ್ಟಿತು. ರದ್ದಾಗಲಿ ರದ್ದಾಗಲಿ ಅಕ್ರಮ ನೇಮಕಾತಿ ರದ್ದಾಗಲಿ, ತನಿಖೆಯಾಗಲಿ ತನಿಖೆಯಾಗಲಿ ಅಕ್ರಮ ನೇಮಕಾತಿ ತನಿಖೆಯಾಗಲಿ, ಧಿಕ್ಕಾರ ಧಿಕ್ಕಾರ ಚಾಮುಲ್ ಆಡಳಿತ ಮಂಡಳಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು.
ಹಣ ಪಡೆದು ಹುದ್ದೆ ಮಾರಾಟ: ದಲಿತ ಮುಖಂಡ ವೆಂಕಟರಮಣ ಸ್ವಾಮಿ(ಪಾಪು) ಮಾತನಾಡಿ, ಮಾಜಿ ಸಚಿವ ದಿ. ಎಚ್.ಎಚ್.ಮಹದೇವಪ್ರಸಾದ್ ಅವರು ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶವನ್ನಿಟ್ಟುಕೊಂಡು ಮೈಮುಲ್ನಿಂದ ಪತ್ಯೇಕವಾಗಿ ಚಾಮುಲ್ ಮಾಡಿ ಕುದೇರಿನಲ್ಲಿ ಸ್ಥಾಪಿಸಿದರು. ಅವರ ಆಶಯಗಳನ್ನು ಚಾಮುಲ್ ಆಡಳಿತ ಮಂಡಳಿ ಗಾಳಿಗೆ ತೂರಿ ಹೊರ ರಾಜ್ಯ, ಹೊರ ಜಿಲ್ಲೆಗಳ ಅಭ್ಯರ್ಥಿಗಳಿಂದ ಹಣಪಡೆದು ಹುದ್ದೆಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ: ಚಾಮುಲ್ ಹುದ್ದೆಗಳ ನೇಮಕಾತಿಯಲ್ಲಿ ಶೇ.50 ಹುದ್ದೆಗಳು ಹಾಲು ಉತ್ಪಾದಕರ ಮಕ್ಕಳು, ಮನೆಯವರಿಗೆ ಹಾಗೂ ಸಂತೇಮರಹಳ್ಳಿ ಹೋಬಳಿಯ ಜನರಿಗೆ ಕೊಡಬೇಕಿತ್ತು. ಕರ್ನಾಟಕ ಸರ್ಕಾರ ಪರೀಕ್ಷಾ ಪ್ರಾಧಿಕಾರ ಅಥವಾ ಕೆಪಿಎಸ್ಸಿ ವತಿಯಿಂದ ಪರೀಕ್ಷೆ ನಡೆಸದೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮೈಸೂರಿನಲ್ಲಿ ಪರೀಕ್ಷೆ ನಡೆಸಿ ಸಣ್ಣಹುದ್ದೆಯಿಂದ ದೊಡ್ಡಹುದ್ದೆಗಳನ್ನು 10 ಲಕ್ಷದಿಂದ 40 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ.
ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ ತಮ್ಮ ಮೊಮ್ಮಗ, ಸೊಸೆ, ಸಂಬಂಧಿಕರಿಗೆ ಸಂದರ್ಶನ ಮಾಡಿ ಹುದ್ದೆ ನೀಡಿದ್ದಾರೆ. ಆರ್ಟಿಐಯಡಿಯಲ್ಲಿ ಮಾಹಿತಿ ಕೇಳಿದರೆ ನಮ್ಮ ಒಕ್ಕೂಟ ಆರ್ಟಿಐಗೆ ಒಳಪಡುವುದಿಲ್ಲ ಮಾಹಿತಿ ಕೊಡಲು ನಿರಾಕರಿಸುವ ಮೂಲಕ ಕಾನೂನನ್ನು ಉಲ್ಲಂ ಸಿದ್ದಾರೆ ಎಂದರು.
ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿ: ಸರ್ಕಾರ, ಜಿಲ್ಲಾಡಳಿತ ಕೂಡಲೇ ಚಾಮುಲ್ ನೇಮಕಾತಿ ಹುದ್ದೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಬೇಕು. ಅಕ್ರಮ ನೇಮಕಾತಿ ವಜಾಗೊಳಿಸಬೇಕು. ಚಾಮುಲ್ ಆಡಳಿತ ಮಂಡಳಿಯನ್ನು ಸೂಪರ್ಸೀಡ್ ಮಾಡಿ ಹೊಸ ಆಡಳಿತ ಅಧಿಕಾರಿ ನೇಮಿಸಿ ಮರುಪರೀಕ್ಷೆ ನಡೆಸಿ, ಜಿಲ್ಲೆಯ ಪ್ರತಿಭಾವಂತ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪರೀಕ್ಷೆಯಲ್ಲಿ ಮಾನದಂಡ ಪಾಲಿಸಿಲ್ಲ: ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರ ಸ್ವಾಮಿ ಮಾತನಾಡಿ, ಚಾಮುಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಮಾನದಂಡ ಪಾಲಿಸಿಲ್ಲ. ನಿಯಮ, ನೀತಿಗಳನ್ನು ಉಲ್ಲಂ ಸಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ. 18 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಜಿಲ್ಲೆಯಲ್ಲಿ 400ರಿಂದ 500 ಡೇರಿಗಳಿದ್ದು, ಒಬ್ಬ ಅಧ್ಯಕ್ಷರು ಸಹ ಧರಣಿಯಲ್ಲಿ ಭಾಗವಹಿಸದೆ ಇರುವುದು ದುರಂತ. ಮುಂದಿನ ದಿನಗಳಲ್ಲಿ ನಡೆಯುವ ಒಕ್ಕೂಟದ ಚುನಾವಣೆಯಲ್ಲಿ ಇಂತಹ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರು, ನಿರ್ದೇಶಕರಿಗೆ ತಕ್ಕಪಾಠ ಕಲಿಸುವ ಕೆಲಸ ಮಾಡಬೇಕು.
ಒಕ್ಕೂಟಕ್ಕೆ ಹೊಸದಾಗಿ ನೇಮಕವಾಗಿರುವ 69 ನೌಕರರ ವೇತನವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷ ಡಿ.ಪರಶಿವಮೂರ್ತಿ ಮಾತನಾಡಿ, ಟೆಕ್ನಿಕಲ್ ಹುದ್ದೆಯಲ್ಲಿ ಪ್ರತಿಭಾವಂತರಾದ ಜ್ಯೋತಿ ಎಂಬ ಅಭ್ಯರ್ಥಿಯು ಲಿಖೀತ ಪರೀಕ್ಷೆಯಲ್ಲಿ 1.5ರ ಆಯ್ಕೆ ಪಟ್ಟಿಯಲ್ಲಿ ಮೊದಲಿಗಳಾಗಿದ್ದು, 106/200 ನಾಲ್ಕನೆಯ ಸ್ಥಾನದ ರಮ್ಯಪ್ರಸಾದ್ 80/200 ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಚಾಮುಲ್ ಆಡಳಿತ ಮಂಡಳಿ ನೇರ ಹೊಣೆ: ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಮಾತನಾಡಿ, ಚಾಮುಲ್ನಲ್ಲಿ ವರುಣಾ, ಮೈಸೂರು, ಮಂಡ್ಯದವರಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯವರಿಗೆ ಅನ್ಯಾಯ ಮಾಡಿದ್ದಾರೆ. ಜಿಲ್ಲೆಯ ಪ್ರತಿಭಾವಂತರಿಗೆ ಮೋಸವಾಗಿದೆ. ಇದಕ್ಕೆ ಚಾಮುಲ್ ಆಡಳಿತ ಮಂಡಳಿ ನೇರಹೊಣೆಯಾಗಿದೆ ಎಂದರು.
ಈ ವೇಳೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ, ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಗೋವಿಂದ ರಾಜು, ನಿಜಧ್ವನಿ ಸೇನಾ ಸಮಿತಿ ಅಧ್ಯಕ್ಷ ಸಿ.ಎನ್.ಗೋವಿಂದ ರಾಜು, ಡಿಎಸ್ಎಸ್ ಕೆ.ಎಂ.ನಾಗರಾಜು, ಡಿ.ಎನ್.ನಟರಾಜು, ಎಂ.ಪಿ.ಬಸವಣ್ಣ, ನಾಗರಾಜು, ಜಯ ಕರ್ನಾಟಕ ಸೇನಾ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಕುಮಾರ್ ಮಧುವನಹಳ್ಳಿ, ಉಪಾಧ್ಯಕ್ಷ ಎಸ್.ಮರಪ್ಪ, ಮಹಿಳಾಧ್ಯಕ್ಷ ಶಿವಮ್ಮ, ರಾಮಸಮುದ್ರ ಸುರೇಶ್, ಶಂಕರಪ್ಪ, ಬದನಗುಪ್ಪೆ ಮಹೇಶ್, ಕುದೇರು ರೇವಣ್ಣ, ಉಮ್ಮತ್ತೂರು ನಾಗೇಶ್, ವೀಣಾ, ಎಂ.ಸಿದ್ದರಾಜು, ಜಿ.ಎನ್.ಶ್ರೀನಿವಾಸ, ಲೋಕೇಶ್, ಉಮ್ಮತ್ತೂರು ಸೋಮಣ್ಣ ಭಾಗವಹಿಸಿದ್ದರು.