ಬಿ.ಸಿ.ರೋಡ್: ನಡೆದಾಡಲೂ ಅಯೋಗ್ಯವಾದ ರಸ್ತೆಗಳು
Team Udayavani, Jul 22, 2017, 9:27 PM IST
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಸಹಿತ ಬಿ.ಸಿ.ರೋಡ್ ನಗರ ಕೇಂದ್ರ ರಸ್ತೆಗಳು ಹೊಂಡಗುಂಡಿಯಿಂದ ತುಂಬಿದ್ದು ವಾಹನ ಸಂಚಾರಕ್ಕೆ ಮಾತ್ರವಲ್ಲದೆ ನಡೆದು ಹೋಗುವುದಕ್ಕೂ ಅಯೋಗ್ಯ ಎನಿಸಿವೆ.
ಪ್ರತಿಭಟನೆ, ಮನವಿ, ದೂರಿಗೆ ಯಾವುದೇ ಸ್ಪಂದನವಿಲ್ಲ. ಪಾಣೆಮಂಗಳೂರು ಶ್ರೀ ಸತ್ಯದೇವತಾ ಕಲ್ಲುರ್ಟಿ ಸನ್ನಿಧಿಯಿಂದ ನರಿಕೊಂಬು ಕಡೆಗೆ ತೆರಳುವ ಮಾರ್ಗದ ತಿರುವಿನಲ್ಲಿ ಬೃಹತ್ ಹೊಂಡವಾಗಿದೆ. ಇದು ನರಿಕೊಂಬು, ಶಂಭೂರು ಕಡೆಗೆ ತೆರಳುವ ವಾಹನಗಳಿಗಷ್ಟೇ ಅಲ್ಲ, ಹೆದ್ದಾರಿಯಲ್ಲಿ ತೆರಳುವ ಸಾವಿರರಾರು ವಾಹನಗಳಿಗೂ ಅಪಾಯಕಾರಿಯಾಗಿದೆ. ಬಿ.ಸಿ.ರೋಡ್ನ ಕಾಮಾಜೆಯಿಂದ ಸರಕಾರಿ ಪದವಿ ಕಾಲೇಜಿನವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಬಿ.ಸಿ.ರೋಡ್ ಪೇಟೆ ಕೆಸರಿನಿಂದ ಕೂಡಿದ್ದು ಜನ ಸಂಚಾರವೇ ಕಷ್ಟ ಎಂಬಂತಾಗಿದೆ. ಬಸ್ಸುಗಳಿಗೆ ಹತ್ತುವುದಕ್ಕೆ ನಿಲ್ಲಲೂ ಕೂಡಾ ಜಾಗವಿಲ್ಲದಂತಾಗಿದೆ.ಕೆಸರಿನಲ್ಲೇ ಬಸ್ಸಿಗಾಗಿ ಕಾಯುವಂತಾಗಿದೆ.