ಮಂಗಳೂರು: ಶೀಘ್ರವೇ ಹಳೆಯ ವಿದ್ಯುತ್ ತಂತಿ ಬದಲಾವಣೆ
Team Udayavani, Jan 20, 2022, 8:15 AM IST
ಮಂಗಳೂರು: ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ಸೋರಿಕೆ ತಪ್ಪಿಸಿ ಗುಣಮಟ್ಟದ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ 30ರಿಂದ 40 ವರ್ಷಗಳಷ್ಟು ಹಳೆಯದಾದ ವಿದ್ಯುತ್ ತಂತಿಗಳನ್ನು ಹೊಸದಕ್ಕೆ ಬದಲಾಯಿಸಲು ಸರಕಾರ ತೀರ್ಮಾನಿಸಿದೆ.
ಕೇಂದ್ರ ಸರಕಾರದ ವಿತರಣ ವಲಯದ ಪರಿಷ್ಕೃತಯೋಜನೆ (ರಿವ್ಯಾಂಪ್ಡ್ ಡಿಸ್ಟ್ರಿಬ್ಯೂ ಶನ್ ಸೆಕ್ಟರ್ಸ್ಕೀಮ್ – ಆರ್ಡಿಎಸ್ಎಸ್) ಅಡಿಯಲ್ಲಿ ಕಾಮಗಾರಿ ನಡೆಯಲಿದ್ದು, ಸದ್ಯವೇ ಆರಂಭಗೊಳ್ಳಲಿದೆ.
ರಾಜ್ಯಕ್ಕೆ 8,500 ಕೋಟಿ ರೂ. ಲಭಿಸಲಿದ್ದು, ಟ. ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ)ಗೆ 1,100 ಕೋಟಿ ರೂ. ಸಿಗಲಿದೆ. ದ.ಕ. ಜಿಲ್ಲೆಗೆ 294 ಕೋಟಿ ರೂ. ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಲಾಗಿದೆ. ಹಳೆಯ ತಂತಿ ಬದಲಾವಣೆಗೆಂದೇ 95 ಕೋಟಿ ರೂ. ತೆಗೆದಿರಿಸಲಾಗಿದೆ.
ಮೆಸ್ಕಾಂನ ವಿದ್ಯುತ್ ವಿತರಣಾ ನಷ್ಟ ಪ್ರಸ್ತುತ ಶೇ. 10.7ರಷ್ಟಿದೆ.ಅಧಿಕಾರಿಗಳ ಪ್ರಕಾರ, ಈ ಯೋಜನೆಯಡಿ ಅಧಿಕ ಮೊತ್ತವು ಗ್ರಾಮೀಣ ಪ್ರದೇಶಗಳಲ್ಲಿನ ತಂತಿ ಬದಲಾವಣೆ, ಹೊಸ ಪರಿವರ್ತಕಗಳ ಸ್ಥಾಪನೆಗೆ ವಿನಿಯೋಗವಾಗಲಿದೆ. ಮಂಗಳೂರು, ಉಡುಪಿ ಮೊದಲಾದ ನಗರ ಪ್ರದೇಶಗಳಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗೆ ಇದರಲ್ಲಿ ಸದ್ಯ ಅವಕಾಶವಿಲ್ಲ.
ಪ್ರಮುಖ ಕಾಮಗಾರಿಗಳು
ತಂತಿ ಬದಲಾವಣೆ, ಹೆಚ್ಚುವರಿ ಪರಿವರ್ತಕ ಸ್ಥಾಪನೆ, ಸಬ್ಸ್ಟೇಶನ್ ನಿರ್ಮಾಣ ಮತ್ತು ಸ್ಮಾರ್ಟ್ ಮೀಟರ್ ಹಾಕುವುದು ಪ್ರಮುಖ ಕಾಮಗಾರಿಗಳು. ಕಾರ್ಯಕ್ಷಮತೆ ಹೆಚ್ಚಿಸಿ ವಿದ್ಯುತ್ ವಿತರಣೆಯಲ್ಲಿ ಆಗುವ ಒಟ್ಟು ತಾಂತ್ರಿಕ ಮತ್ತು ವಾಣಿಜ್ಯ ನಷ್ಟವನ್ನು ಶೇ. 12ರಿಂದ 15ರಷ್ಟು ಕಡಿಮೆ ಮಾಡುವುದು ಹಾಗೂ ಸರಾಸರಿ ಪೂರೈಕೆ ವೆಚ್ಚವನ್ನು ಶೂನ್ಯಕ್ಕೆ ತಂದು ಫಲಿತಾಂಶ ಆಧಾರಿತ ವಿದ್ಯುತ್ ವಿತರಣೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಈ ಯೋಜನೆಯನ್ನು ರೂಪಿಸಿದೆ.
ಕೇಂದ್ರ ಸರಕಾರ ಮೊದಲ ಬಾರಿಗೆ ಇಂತಹ ಯೋಜನೆ ರೂಪಿಸಿದ್ದು, ವಿದ್ಯುತ್ ವಿತರಣೆಯಲ್ಲಿ ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡಲು ಹಾಗೂ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಹಣ ವಿನಿಯೋಗ ವಾಗಲಿದೆ. ರಾಜ್ಯಕ್ಕೆ 8,500 ಕೋಟಿ ರೂ. ಯೋಜನೆ ತಯಾರಿಸಿದ್ದು, ಇನ್ನೂ 1,000 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಲಾಗಿದೆ.
– ಸುನಿಲ್ ಕುಮಾರ್,
ಇಂಧನ ಸಚಿವ