ರೈಲ್ವೇ ಸೌಲಭ್ಯ ಉನ್ನತೀಕರಣಕ್ಕೆ ಕ್ರಮ: ಸಚಿವ ಡಿ.ವಿ.ಎಸ್.
Team Udayavani, Apr 10, 2017, 3:02 PM IST
ಮಂಗಳೂರು: ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ನೇರ ಸಂಪರ್ಕ ಕಲ್ಪಿಸುವ “ಕುಡ್ಲ ಎಕ್ಸ್ಪ್ರಸ್’ ರೈಲು ಸಂಚಾರಕ್ಕೆ ರವಿವಾರ ಚಾಲನೆ ನೀಡಲಾಯಿತು. ಈ ಮೂಲಕ ಮಂಗಳೂರಿನಿಂದ ಬೆಂಗಧಿಳೂರಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಸುಮಾರು ಎರಡು ದಶಕಗಳ ಬೇಡಿಕೆ ಈಡೇರಿದೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣಧಿದಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಗೋವಾದ ಪಣಜಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ರಿಮೋಟ್ ಒತ್ತಿ ನೂತನ ರೈಲಿಗೆ ಚಾಲನೆ ಕೊಟ್ಟರು.
ಕುಡ್ಲ ಎಕ್ಸ್ಪ್ರೆಸ್ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಕೇಂದ್ರ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ, “ನಾನು ರೈಲ್ವೇ ಸಚಿವನಾಗಿದ್ದಾಗ ಬಜೆಟ್ನಲ್ಲಿ ಘೋಷಿಸಿದ್ದ ಕುಡ್ಲ ಎಕ್ಸ್ಪ್ರೆಸ್ ರೈಲು ಇದೀಗ ಚಾಲನೆಗೊಂಡಿರುವುದು ನನಗೆ ಅತೀವ ಸಂತೋಷ ತಂದಿದೆ. ಈ ರೈಲು ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ನೀಡುವುದರ ಜತೆಗೆ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ’ ಎಂದು ಹೇಳಿದರು.
ನಿಲ್ದಾಣ ಉನ್ನತೀಕರಣಕ್ಕೆ ಕ್ರಮ
ದೇಶದಲ್ಲಿ ಒಟ್ಟು 400 ರೈಲು ನಿಲ್ದಾಣಧಿಗಳನ್ನು ಎ ಮತ್ತು ಎ-1 ದರ್ಜೆ ನಿಲ್ದಾಣಗಳಾಗಿ ಗುರುತಿಸಲಾಗಿದ್ದು ಮಂಗಳೂರು ಸೆಂಟ್ರಲ್ ನಿಲ್ದಾಣವೂ ಸೇರಿದೆ. ಈ ನಿಲ್ದಾಣಗಳ ಉನ್ನತೀಕರಣಕ್ಕೆ ಪ್ರಸ್ತಾವ ರೂಪಿಸಲಾಗಿದ್ದು ಪ್ರಥಮ ಹಂತದ ಯಾದಿಯಲ್ಲೇ ಮಂಗಳೂರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆಯೇ ಮಂಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆ ನಿಲ್ದಾಣವಾಗಿ ರೂಪಿಸುವ ಪ್ರಸ್ತಾವನೆಯಿತ್ತು. ಆದರೆ ಕೇಂದ್ರ ಸರಕಾರವು ಪ್ರಸ್ತುತ ವಿಶ್ವದರ್ಜೆ ಪರಿಕಲ್ಪನೆಗೆ ಎ ಮತ್ತು ಎ1 ರೈಲು ನಿಲ್ದಾಣಗಳೆಂಬ ಮಾನದಂಡ ನೀಡಿರುವ ಹಿನ್ನೆಲೆಯಲ್ಲಿ ಈ ರೀತಿಯ ಬದಲಾವಣೆ ಆಗಿದೆ ಎಂದು ಸದಾನಂದ ಗೌಡ ತಿಳಿಸಿದರು.
ನಾನು ರೈಲ್ವೇ ಸಚಿವನಾಗಿದ್ದ 6 ತಿಂಗಳ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 1,618 ಕೋಟಿ ರೂ. ಬಿಡುಗಡೆ ಮಾಡಿದ್ದು , 26 ಹೊಸ ರೈಲು ಸಂಚಾರ ಆರಂಭಿಸುವ ಪ್ರಸ್ತಾವನೆ ಮಾಡಿದ್ದೆ. ಅವುಗಳ ಪೈಕಿ ಮಂಗಳೂರಿನಲ್ಲಿ ಈಗ ಉದ್ಘಾಟನೆಗೊಂಡಿರುವ ರೈಲು 24ನೇಯದ್ದು. ದ.ಕ. ಜಿಲ್ಲೆಯಲ್ಲಿ ಪಡೀಲ್ ರೈಲ್ವೇ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಜಪ್ಪು ಕುಡುಪಾಡಿಯಲ್ಲಿಯೂ ಮೇಲ್ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪುತ್ತೂರು ಹಾಗೂ ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಕೂಡ ಆದರ್ಶ ರೈಲ್ವೇ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಸಚಿವ ಬಿ. ರಮಾಧಿನಾಥ ರೈ ಮಾತನಾಡಿ, ಕುಡ್ಲ ಎಕ್ಸ್ಪ್ರೆಸ್ ರೈಲು ಕಡಿಮೆ ಅವಧಿಯಲ್ಲಿ ಬೆಂಗಳೂರು ತಲುಪುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಂಡರೆ, ಅದರಿಂದ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದರು.
1,000 ಕೋಟಿ ರೂ. ವಿನಿಯೋಗ
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ರೈಲ್ವೇ ಇಲಾಖೆಯಿಂದ ಸುಮಾರು 1,000 ಕೋಟಿ ರೂ. ವೆಚ್ಚದ ಕಾಮಗಾರಿಗಳು ಆಗಿವೆ. ಆಮೆ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲಾಖೆ ಇದೀಗ ಕುದುರೆ ವೇಗದಲ್ಲಿ ಮುನ್ನಡೆಯುತ್ತಿದೆ. ಕುಡ್ಲ ಎಕ್ಸ್ಪ್ರೆಸ್ ರೈಲು ಬೇಡಿಕೆಯನ್ನು ಆದಷ್ಟು ಶೀಘ್ರ ಈಡೇರಿಸಿದ ರೈಲ್ವೇ ಸಚಿವರು ಹಾಗೂ ಸಚಿವ ಸದಾನಂದ ಗೌಡರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಜತೆಗೆ ಈ ರೈಲು ಅನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸಚೇತಕ ಐವನ್ ಡಿ’ಸೋಜಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್ ಶುಭಕೋರಿದರು. ಮನಪಾ ಸದಸರಾದ ವಿಜಯ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರವೀಣ್ಚಂದ್ರ ಆಳ್ವ ಭಾಗವಹಿಸಿದ್ದರು.
ರೈಲ್ವೇ ಪಾಲಾ^ಟ್ ವಿಭಾಗದ ವಿಭಾಗೀಯ ಪ್ರಬಂಧಕ ನರೇಶ್ ಲಾಲ್ವಾನಿ, ಮೈಸೂರು ವಿಭಾಗ ಡಿಆರ್ಎಂ ಅತುಲ್ ಗುಪ್ತಾ, ಕೊಂಕಣ ರೈಲ್ವೇ ಅಧಿಕಾರಿ ಮಹಮ್ಮದ್ ಅಸೀಮ್ ಸುಲೈಮಾನ್ ಉಪಸ್ಥಿತರಿದ್ದರು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಹಾಯಕ ಸ್ಟೇಶನ್ ಮಾಸ್ಟರ್ ಕಿಶನ್ ಕುಮಾರ್ ನಿರ್ವಹಿಸಿದರು.
ಸೆಂಟ್ರಲ್ಗೆ ವಿಸ್ತರಿಸಲು ಆಗ್ರಹ
ಕುಡ್ಲ ಎಕ್ಸ್ಪ್ರೆಸ್ ಅನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಬೇಕೆಂದು ವೇದಿಕೆಯಲ್ಲಿದ್ದ ಎಲ್ಲ ಜನಪ್ರತಿನಿಧಿಗಳು ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ಡಿ.ವಿ. ಸದಾನಂದ ಗೌಡರು ಈ ಬಗ್ಗೆ ತಾನು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಈಗಾಗಲೇ ರೈಲ್ವೇ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಬಗೆಹರಿಸಿ ಕುಡ್ಲ ಎಕ್ಸ್ಪ್ರೆಸ್ಸನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
– ರವಿವಾರ ಉದ್ಘಾಟನೆಗೊಂಡ ಇತರ ಯೋಜನೆಗಳು
– ಮಂಗಳೂರು ಜಂಕ್ಷನ್-ಚೆರ್ವತ್ತೂರು ರೈಲುಮಾರ್ಗ ವಿದ್ಯುದೀಕರಣ (82 ಕಿ.ಮೀ.)
- ಪಣಂಬೂರು-ಜೋಕಟ್ಟೆ ಹಳಿ ದ್ವಿಗುಣ (13.5 ಕಿ.ಮೀ.), ಹೊಸ ಬ್ಲಾಕ್ ಸ್ಟೇಶನ್
- 80 ಲಕ್ಷ ರೂ. ವೆಚ್ಚದಲ್ಲಿ ತೋಕೂರಿನಲ್ಲಿ ಸರಕು ನಿರ್ವಹಣೆ ಸೈಡಿಂಗ್ ಸೌಲಭ್ಯ
– ರೈಲ್ವೇ ಸಮಾರಂಭಕ್ಕೆ ಬಹಿಷ್ಕಾರ ಹಾಕಿದ್ದ ಡಿವಿ
ರೈಲ್ವೇ ಸಚಿವನಾಗಿ ಎರಡೂವರೆ ವರ್ಷಗಳ ಹಿಂದೆ ಬಜೆಟ್ನಲ್ಲಿ ಘೋಷಿಸಿದ್ದ ಕುಡ್ಲ ಎಕ್ಸ್ಪ್ರೆಸ್ ಆರಂಭಿಸದಿದ್ದರೆ ಇನ್ನುಮುಂದೆ ರೈಲ್ವೇ ಇಲಾಖೆಯ ಯಾವುದೇ ಸಮಾಧಿರಂಭದಲ್ಲಿ ಹಾಜರಾಗುವುದಿಲ್ಲ ಎಂದು ರೈಲ್ವೇ ಸಚಿವರಿಗೆ ತಿಳಿಸಿದ್ದೆ. ಇತ್ತೀಚೆಗೆ ಹಾಸನ- ಬೆಂಗಳೂರು ಹೊಸ ರೈಲು ಮಾರ್ಗ ಉದ್ಘಾಟನೆ ಸಮಾರಂಭಕ್ಕೂ ಅದೇ ಕಾರಣಕ್ಕೆ ಹಾಜರಾಗಿರಲಿಲ್ಲ. ಇದಾದ ಮೂರೇ ದಿನದಲ್ಲಿ ಕುಡ್ಲ ರೈಲು ಸಂಚಾರ ಆರಂಭವನ್ನು ರೈಲ್ವೇ ಸಚಿವರು ಘೋಷಿಸಿದರು ಎಂದು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.