ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ
Team Udayavani, Nov 19, 2017, 5:07 PM IST
ಪುಂಜಾಲಕಟ್ಟೆ: ಬಂಟ್ವಾಳ ತಾ| ಅಜ್ಜಿಬೆಟ್ಟು, ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರದೊಂದಿಗೆ ಪುನರ್ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದ್ದು, ಆ ಪ್ರಯುಕ್ತ ನ. 19 ರಂದು ಶ್ರೀ ಕ್ಷೇತ್ರದಲ್ಲಿ ಶಿಲಾ ಪೂಜಾ ಸಮಾರಂಭವು ನಡೆಯಲಿದೆ.
ದೇಗುಲವು ಮಾಗಣೆಯ ಏಳು ಗ್ರಾಮಗಳಾದ ಅಜ್ಜಿಬೆಟ್ಟು, ಇರ್ವತ್ತೂರು ಪದವು, ಪಿಲಾತಬೆಟ್ಟು, ಮೂಡುಪಡುಕೋಡಿ, ಪಿಲಿಮೊಗರು, ಕೊಡಂಬೆಟ್ಟು, ಚೆನ್ನೈತ್ತೋಡಿ ಗ್ರಾಮಗಳಿಗೆ ಸಂಬಂಧಿಸಿದ್ದು, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕ್ಷೇತ್ರದ ಜೀರ್ಣೋದಾಧರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸುಮಾರು 2ಕೋ. ರೂ. ವೆಚ್ಚದ ಪುನರ್ನಿರ್ಮಾಣ ಕಾರ್ಯಕ್ಕೆ ಜೀರ್ಣೋದ್ಧಾರ ಸಮಿತಿ ರಚನೆಯಾಗಿದ್ದು, ಈಗಾಗಲೇ ಮುಂಬಯಿ,ಬೆಂಗಳೂರು ಸಹಿತ ವಿವಿಧೆಡೆ ಸಮಿತಿ ರಚಿಸಲಾಗಿದೆ. ಜೀರ್ಣೋದ್ಧಾರ ಕಾರ್ಯಗಳ ವಿಜ್ಞಾಪನಾ ಪತ್ರವನ್ನು ಊರ ಪರವೂರ ಭಕ್ತರಿಗೆ ತಲುಪಿಸುವ ಕಾರ್ಯಸಾಗುತ್ತಿದೆ. ಪ್ರಶ್ನೆ ಚಿಂತನೆಯಂತೆ ವೈದಿಕ ಕಾರ್ಯಗಳಿಗೆ ಅರ್ಚಕ ವರ್ಗವನ್ನೂ ಬದಲಾಯಿಸಲಾಗಿದೆ.
ದೇವಸ್ಥಾನದ ಮುಂಭಾಗವನ್ನು ಯಂತ್ರದ ಮೂಲಕ ಸಮತಟ್ಟುಗೊಳಿಸಲಾಗಿದ್ದು, ವಿಶಾಲ ಅಂಗಣ ನಿರ್ಮಿಸಲಾಗಿದೆ. ಪಕ್ಕದಲ್ಲಿರುವ ಸಮುದಾಯ ಭವನವನ್ನು ಸುಸಜ್ಜಿತಗೊಳಿಸಲಾಗಿದೆ. ಹಿಂಭಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಸುವರ್ಣ ಗ್ರಾಮ ಯೋಜನೆಯ 9 ಲಕ್ಷ ರೂ. ಅನುದಾನದಿಂದ ರಂಗ ಮಂದಿರ ನಿರ್ಮಾಣವಾಗುತ್ತಿದೆ.
ಸಚಿವ ಬಿ.ರಮಾನಾಥ ರೈ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾಗಿ, ವಸಂತ ಶೆಟ್ಟಿ ಕೇದಗೆ ಅಧ್ಯಕ್ಷರಾಗಿ ಹಾಗೂ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿ ಮತ್ತು ಸಮಿತಿಗಳ ಇತರ ಪದಾಧಿಕಾರಿಗಳು, ಸದಸ್ಯರು ಪುನರ್ನಿರ್ಮಾಣದ ಯಶಸ್ಸಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಭಕ್ತರ ಆರಾಧನಾ ಕೇಂದ್ರ
ಕ್ಷೇತ್ರದ ಪುನರ್ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು ಕಾಮಗಾರಿಗಳು ನಡೆಯುತ್ತಿವೆ. ಕ್ಷೇತ್ರವನ್ನು ಎಲ್ಲ ಭಕ್ತರ ಆಕರ್ಷಣೆಯ ಆರಾಧನಾ ಕೇಂದ್ರವಾಗಿ ರೂಪಿಸಲು ಸಂಕಲ್ಪಿಸಲಾಗಿದ್ದು ಈ ನಿಟ್ಟಿನಲ್ಲಿ ಭಕ್ತರು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದಾರೆ.
–ಉದಯ ಕುಮಾರ್ ಶೆಟ್ಟಿ
ಕುಂಡೋಳಿಗುತ್ತು (ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು)